ಅಂದು ಮಲಗಿದ್ದರೆ ಇಂದು ತಂಡದಲ್ಲಿರುತ್ತಿರಲಿಲ್ಲ!
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ವಿಶ್ವಕಪ್ ಗಾಗಿ ತಯಾರಿ ನಡೆಸುತ್ತಿರುವಾಗಲೇ ಮಂದಾನಾ ಅವರು ಮೊಣಕಾಲು ಗಾಯದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ, ಅವರು ತಿಂಗಳನಾನುಗಟ್ಟಲೆ ವಿಶ್ರಾಂತಿ ಪಡೆಯುವ ಹಾಗಾಗಿತ್ತು. ಅವರು ಹಾಗೆ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದರೆ ಆಕೆ ಇಂದು ವಿಶ್ವಕಪ್ ತಂಡದಲ್ಲಿ ಇರುತ್ತಿರಲಿಲ್ಲ.
ಪರಿಶ್ರಮದಿಂದ ಸಾಧನೆ ತೋರಿದ ಮಂದಾನಾ
ಮನುಷ್ಯ ತಾನೊಂದು ಬಗೆದರೆ, ದೈವ ಬೇರೊಂದು ಬಗೆಯುತ್ತದೆ ಎಂಬುದೊಂದು ಮಾತಿದೆ. ಆದರೆ, ಕೆಲವೊಮ್ಮೆ ದೈವ ಬೇರೊಂದು ಬಗೆದರೂ ಮನುಷ್ಯನಲ್ಲಿ ಅದನ್ನು ಗೆಲ್ಲುವ ಛಾತಿ, ಕಠಿಣ ಪರಿಶ್ರಮಪಡುವ ಮನಸ್ಸು ಇದ್ದರೆ ತನ್ನ ಸಾಧನೆಗೆ ಅಡ್ಡಿ ಬರುವ ಎಲ್ಲಾ ಅಡೆತಡೆಗಳನ್ನೂ ಮೆಟ್ಟಿ ನಿಂತು ಮುಂದೆ ಸಾಗಬಲ್ಲ. ಇದನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಮಂದಾನಾ, ತಮ್ಮ ಮೊಣಕಾಲು ನೋವನ್ನು ಗೆದ್ದು, ಫಿಟ್ನೆಸ್ ಸಂಪಾದಿಸಿ, ತಂಡಕ್ಕೆ ಸೇರ್ಪಡೆ ಮುನ್ನ ನಡೆಸಲಾಗುವ ಎಲ್ಲಾ ಪರೀಕ್ಷೆಗಳಲ್ಲಿ ಪಾಸಾಗಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿನ್ನಸ್ವಾಮಿಯಲ್ಲಿ ಕಸರತ್ತು
ಅಂದಹಾಗೆ, ಆಕೆಯ ಫಿಟ್ನೆಸ್ ಸಂಪಾದನೆಗೆ ಸಹಕಾರಿಯಾಗಿದ್ದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ. ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಅಡಿಯಲ್ಲಿ ಬರುವ ಈ ಸಂಸ್ಥೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕಾರ್ಯ ನಿರ್ವಹಿಸುತ್ತಿದೆ ಅದು. ಹಾಗಾಗಿ, ಚಿನ್ನಸ್ವಾಮಿಯಲ್ಲೇ ತಮ್ಮ ಫಿಟ್ನೆಸ್ ಗಳಿಸಲು ಪ್ರಯತ್ನಿಸಿದ್ದರು ಮಂದಾನಾ.
ವೈದಕೀಯ ಸಿದ್ಧಾಂತ ಬೋಧಿಸುತ್ತಿದ್ದ ವೈದ್ಯರು
ಆದರೆ, ಈಕೆಯನ್ನು ನಿತ್ಯವೂ ಪರೀಕ್ಷಿಸುತ್ತಿದ್ದ ವೈದ್ಯರಿಗೆ ಆಕೆಯ ಉತ್ಸಾಹ ನೋಡಿ ಗಾಬರಿಯಾಗುತ್ತಿತ್ತಂತೆ. ಮೊಣಕಾಲು ಗಾಯ ಮಾಯಲು ಕೆಲವಾರು ತಿಂಗಳುಗಳೇ ಬೇಕಿರುವುದರಿಂದ ಕೊಂಚ ಗಾಯ ಮಾಯುತ್ತಲೇ ಫಿಟ್ನೆಸ್ ಕಡೆ ಗಮನ ಕೊಡಬಾರದೆಂದು ತಾಕೀತು ಮಾಡಿದ್ದರಂತೆ. ಇದರಿಂದ ಮುಂದೆ ತೊಂದರೆಯಾಗುತ್ತದೆ ಎಂಬುದು ಅವರ ನಿಲುವು.
ಸಿದ್ಧಾಂತವನ್ನೂ ಮೀರಿಸಿದ ಆತ್ಮಶಕ್ತಿ!
ಆದರೆ, ಮಂದಾನಾ ಅವರ ಆತ್ಮಶಕ್ತಿ ಎಷ್ಟಿತ್ತೆಂದರೆ, ಅವರ ಉತ್ಸಾಹದ ಮಂದೆ ಮೊಣಕಾಲು ಗಾಯವೂ ಬೇಗನೇ ಮಾಯವಾಯಿತು ಹಾಗೂ ಫಿಟ್ನೆಸ್ ಅನ್ನೂ ಬೇಗನೇ ಗಳಿಸಿದರು ಅವರು. ಇಷ್ಟು ವೇಗವಾಗಿ ಅವರ ಗಾಯವೂ ಮಾಯವಾಗಿ, ಫಿಟ್ನೆಸ್ ಕೂಡಾ ಗಳಿಸಿದ್ದನ್ನು ನೋಡಿ ಖುದ್ದು ದಂಗಾದ ಅವರ ವೈದ್ಯರು, ಮಂದಾನಾ ಅವರ ಹೆತ್ತವರ ಬಳಿ ''ಮಂದಾನಾ ಉತ್ಸಾಹವನ್ನು ತಡೆಯಲು ಸಾಧ್ಯವಿಲ್ಲ. ಅವರ ಆತ್ಮಶಕ್ತಿಗೆ ದೈವವೇ ಸಹಾಯ ಮಾಡಿದೆ. ಹಾಗಾಗಿಯೇ ಅವರ ಗಾಯವೂ ಬೇಗನೇ ವಾಸಿಯಾಗಿದೆ'' ಎಂದಿದ್ದರಂತೆ.
ಬೆವರಿನ ಬೆಲೆ ಪಡೆದ ಮಂದಾನಾ
ತಮ್ಮ ಆತ್ಮಬಲ ಹಾಗೂ ಸಾಧಿಸಲೇಬೇಕು ಎಂಬ ಕಠಿಣ ಪರಿಶ್ರಮದಿಂದ ಮೂಲೆಗುಂಪಾಗಬಹುದಾಗಿದ್ದ ತಮ್ಮ ಭವಿಷ್ಯವನ್ನು ಮತ್ತೆ ಪ್ರಜ್ವಲಿಸುಂತೆ ಮಾಡಿದ ಮಂದಾನಾ, ವಿಶ್ವಕಪ್ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ 90 ಹಾಗೂ 106 ರನ್ ಚಚ್ಚಿ ತಮ್ಮಲ್ಲಿನ ಆತ್ಮಶಕ್ತಿ ಎಂಥದ್ದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸೆಹ್ವಾಗ್ ಅವರಂಥವರಿಂದಲೂ ಪ್ರಶಂಸೆ
ಇವರ ಕಥೆಯು ಕೆಲವಾರು ವಾಹಿನಿಗಳಲ್ಲಿ ವರದಿಯಾದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂಥವರೂ ಈಕೆಯ ಸಾಧನೆಗೆ ಶಹಬ್ಬಾಸ್ ಎಂದಿದ್ದಾರೆ.