ಕೊಲಂಬೋ, ಆಗಸ್ಟ್ 17: ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಶ್ರೀಲಂಕಾ ಸರಣಿಯ ಉಳಿದೆರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮೊದಲನೇ ಟೆಸ್ಟ್ ವೇಳೆ ಗಾಯಗೊಂಡ ಧವನ್ ಅವರು ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.
ಎಡಗೈ ಆಟಗಾರ ಶಿಖರ್ ಧವನ್ ಅವರು ಗಾಲೆಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ಯಾಚ್ ತೆಗೆದುಕೊಳ್ಳಲು ಯತ್ನಿಸಿದಾಗ ಕೈಗೆ ಪೆಟ್ಟು ಮಾಡಿಕೊಂಡಿದ್ದರು. ಕಳೆದ ವಾರದ ಧವನ್ ಅವರ ಬಲಗೈಗೆ ಆಗಿರುವ ಗಾಯ ವಾಸಿಯಾಗಲು ಕನಿಷ್ಠ 4 ರಿಂದ 6 ವಾರಗಳ ಕಾಲ ಬೇಕಾಗುತ್ತದೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ್ದಾರೆ. [ಲಂಕೆಗೆ ಹಾರಲಿರುವ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ]
ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಧವನ್ ಮುಖದಲ್ಲಿ ನಗುವಿದ್ದರೂ ಕೈಯಲ್ಲಿ ಸಕತ್ ನೋವಿತ್ತು ಎಂದು ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಯಿತು. ಫೀಲ್ಡಿಂಗ್ ವೇಳೆ ವರುಣ್ ಅರೋನ್ ಬೌಲಿಂಗ್ ನಲ್ಲಿ ಕೌಶಲ್ ಸಿಲ್ವ ಕ್ಯಾಚ್ ಬಿಟ್ಟಿದ್ದರು.
ಗಾಯದಿಂದಾಗಿ ಎರಡನೇ ಇನ್ನಿಂಗ್ಸ್ ನಲ್ಲಿ ಸರಿಯಾಗಿ ಬ್ಯಾಟಿಂಗ್ ಮಾಡಲು ಆಗಲಿಲ್ಲ. ನೋವಿನಿಂದಾಗಿ ಸ್ಲಿಪ್ ನಿಂದ ಹೊರ ಬಂದೆ ಎಂದಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ 134ರನ್ ಸಿಡಿಸಿದ್ದ ಧವನ್ ಅವರು ನೋವಿನಲ್ಲೇ ಪಂದ್ಯ ಪೂರೈಸಿದ್ದರು.
ಮೊದಲ ಟೆಸ್ಟ್ ಪಂದ್ಯವನ್ನು 63 ರನ್ ಗಳಿಂದ ಸೋತಿರುವ ವಿರಾಟ್ ಕೊಹ್ಲಿ ಪಡೆ ಈಗ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 0-1ರಿಂದ ಹಿಂದಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 20ರಿಂದ ಕೊಲಂಬೋದಲ್ಲಿ ಆರಂಭವಾಗಲಿದೆ. ಭಾನುವಾರದಂದು ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರಿಗೆ ತಂಡವನ್ನು ಸೇರುವಂತೆ ಬಿಸಿಸಿಐ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)