ಕೋಲ್ಕತ್ತಾ, ಮಾ.30: ಐಸಿಸಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಭಾರತದಲ್ಲಿ ಮುಂದಿನ ವಾರದಿಂದ ಇಂಡಿಯನ್ ಪ್ರಿಮಿಯರ್ ಲೀಗ್ 8 ಜ್ವರ ಶುರುವಾಗಲಿದೆ. ಐಪಿಎಲ್ ಸದಾ ಗೊಂದಲ, ವಿವಾದಗಳ ಗೂಡಾಗಿರುವುದು ಗೊತ್ತೇ ಇದೇ. ಈ ಬಾರಿ ಕೂಡಾ ಐಪಿಎಲ್ ಆರಂಭಕ್ಕೂ ಮುನ್ನವೇ ಶಾರುಖ್ ಖಾನ್ ಅವರು ಕಿರಿಕ್ ಶುರು ಮಾಡಿದ್ದಾರೆ. ಸ್ಟಾರ್ ಆಟಗಾರನನ್ನು ಆಡಲು ಬಿಡದಿದ್ದರೆ, ಟೂರ್ನಿಯಿಂದಲೇ ಕೆಕೆಆರ್ ಹೊರನಡೆಯಲಿದೆ ಎಂದು ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ.
ಒಬ್ಬ ಸ್ಟಾರ್ ಆಟಗಾರನ ಸಲುವಾಗಿ ಉಂಟಾಗಿರುವ ಗೊಂದಲ ಪರಿಹಾರವಾಗದಿದ್ದರೆ ಇಡೀ ತಂಡವೇ ಟೂರ್ನಿಯಿಂದ ಹೊರ ಹೋಗುವುದೇ? ಇದನ್ನು ಒಗ್ಗಟ್ಟು ಎನ್ನುವುದೇ ಅಥವ ಧಿಮಾಕು ಎನ್ನುವುದೇ? ಆ ಪ್ರಶ್ನೆ ಆ ಕಡೆ ಇರಲಿ. ಈಗ ವಿವಾದಕ್ಕೆ ಕಾರಣವಾಗಿರುವ ಆಟಗಾರ ವೆಸ್ಟ್ ಇಂಡೀಸ್ ನ ವಿಚಿತ್ರ ಶೈಲಿ ಸ್ಪಿನ್ನರ್ ಸುನಿಲ್ ನರೈನ್.[ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]
ಸುನಿಲ್ ನರೈನ್ ಬೌಲಿಂಗ್ ಶೈಲಿಯಲ್ಲಿ ಅನುಮಾನಗಳು ಕಂಡು ಬಂದಿದ್ದರಿಂದ ಅವರು ವಿಶ್ವಕಪ್ 2015 ಟೂರ್ನಿಗೆ ಆಯ್ಕೆಯಾಗಿದ್ದರೂ ತಂಡದಿಂದ ಹೊರಗುಳಿದಿದ್ದರು. ಈಗ ಇದೇ ಸಮಸ್ಯೆ ಐಪಿಎಲ್ ನಲ್ಲೂ ಕಾಡಲಿದೆ. ಬಿಸಿಸಿಐ ಈ ಬಗ್ಗೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ನೀಡಿಲ್ಲ. ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ. ಏ.8ರಂದು ಮೊದಲ ಪಂದ್ಯವಾಡಲಿರುವ ಕೆಕೆಆರ್ ಗೆ ಇದು ಸಮಸ್ಯೆಯಾಗಿದೆ.
ಸುನಿಲ್ ಸಮಸ್ಯೆ ಬಗೆಹರಿಸದಿದ್ದರೆ ಮಾಜಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ವಾಕ್ ಔಟ್ ಮಾಡಲಿದೆ ಎಂದು ಶಾರುಖ್ ಖಾನ್ ಹೇಳಿದ್ದಾರೆ. ಅಲ್ಲದೆ, ಈ ಸಂಬಂಧವಾಗಿ ಬಿಸಿಸಿಐಯನ್ನು ಕೋರ್ಟಿಗೆ ಎಳೆಯಲು ಸಿದ್ಧ ಎಂದಿದ್ದಾರೆ. [ಐಪಿಎಲ್ 8 ಹರಾಜು ಸಂಪೂರ್ಣ ಅಪ್ದೇಟ್ಸ್]
2014ರ ಚಾಂಪಿಯನ್ಸ್ ಲೀಗ್ ನಲ್ಲಿ ಸುನಿಲ್ ನರೈನ್ ಬೌಲಿಂಗ್ ಶೈಲಿ ಮೇಲೆ ಶಂಕೆ ವ್ಯಕ್ತವಾಗಿತ್ತು. ಅದರೆ, ನಂತರ ಐಸಿಸಿಯಿಂದ ನಡೆಸಲಾದ ಬಯೋ ಮೆಕ್ಯಾನಿಕಲ್ ಪರೀಕ್ಷೆಯಲ್ಲಿ ಸುನಿಲ್ ಪಾಸ್ ಆಗಿದ್ದರು. ಐಸಿಸಿ ಸರ್ಟಿಫಿಕೇಟ್ ಇದ್ದರೂ ಬಿಸಿಸಿಐ ಮಾತ್ರ ಈ ಬಗ್ಗೆ ಬಾಯ್ಬಿಟ್ಟಿಲ್ಲ. ಇದು ಶಾರುಖ್ ಸಿಟ್ಟಿಗೆ ಕಾರಣವಾಗಿದೆ. [ಟಿ20: ಸ್ಪಿನ್ನರ್ ಸುನಿಲ್ 'ಸೂಪರ್' ವಿಶ್ವದಾಖಲೆ]
ಈಗ ಐಪಿಎಲ್ ಆರಂಭಕ್ಕೂ ಮುನ್ನ ಚೆನ್ನೈನಲ್ಲಿರುವ ಶ್ರೀರಾಮಚಂದ್ರ ವಿಶ್ವವಿದ್ಯಾಲಯದಲ್ಲಿ ಸುನಿಲ್ ಪರೀಕ್ಷೆಗೊಳಪಡಬೇಕಾಗುತ್ತದೆ. ಇದಕ್ಕೆ ಕೆಕೆಆರ್ ಒಪ್ಪುತ್ತಿಲ್ಲ. ಬಿಸಿಸಿಐ vs ಶಾರುಖ್ ಕದನ ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾದು ನೋಡಬೇಕಿದೆ.
ಐಪಿಎಲ್ 8 ಪಂದ್ಯಗಳು ಏ.8ರಂದು ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ.
ಒನ್ ಇಂಡಿಯಾಸುದ್ದಿ