ನವದೆಹಲಿ, ಸೆ.17 : ಭಾರತ ಕ್ರಿಕೆಟ್ ತಂಡದ ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಅವರು ಅರ್ಜುನ ಪ್ರಶಸ್ತಿಗೆ ಭಾಜನರಾದರು. ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಸೆ.16 ಶುಕ್ರವಾರ ಜವಹರಲಾಲ್ ನೆಹರು ಮೈದಾನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. [ನನಗೆ ಸಿಕ್ಕಿರುವ ದೊಡ್ಡ ಗೌರವ ಇದಾಗಿದೆ: ರೋಹಿತ್ ಶರ್ಮ]
ರೋಹಿತ್ 2015ನೇ ಸಾಲಿನಲ್ಲಿ ಈ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ರೋಹಿತ್ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರಿಂದ ಅಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಾಗಿರಲಿಲ್ಲ.
ಆದ್ದರಿಂದ 2015ನೇ ಸಾಲಿನ ಪ್ರಶಸ್ತಿಯನ್ನು ಸೆ.16 ರಂದು ಸಚಿವ ವಿಜಯ್ ಗೋಯಲ್ ಅವರಿಂದ ಸ್ವೀಕರಿಸಿದರು. ಇನ್ನು ಅಜಿಂಕ್ಯ ರಹಾನೆ ಅವರು ಈ ಬಾರಿ 2016ನೇ ಸಾಲಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. [ಕೊಹ್ಲಿಗೆ ಖೇಲ್ ರತ್ನ, ರಹಾನೆಗೆ ಅರ್ಜುನ ಪ್ರಶಸ್ತಿ: ಬಿಸಿಸಿಐ ಶಿಫಾರಸ್ಸು]
ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಇಬ್ಬರು ಒಂದೇ ಬಾರಿಗೆ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರಿಂದ ಪ್ರಶಸ್ತಿ ಪಡೆದುಕೊಂಡರು. [ಅರ್ಜುನ ಪ್ರಶಸ್ತಿಗೆ ಕನ್ನಡಿಗ ರಘುನಾಥ್ ಹೆಸರು ಶಿಫಾರಸು]
ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಆಟಗಾರರನ್ನು ಗುರುತಿಸಿ ಕೇಂದ್ರ ಕ್ರೀಡಾ ಸಚಿವಲಯ ಈ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿ ಸರ್ಟೀಫಿಕೆಟ್, ಪದಕ, ಜತೆಗೆ 5 ಲಕ್ಷ ನಗದು ಒಳಗೊಂಡಿರುತ್ತದೆ.