ಮುಂಬೈ, ಜ. 9: ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ಸೀಮಿತ ಓವರ್ ಗಳ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವ ಪಟ್ಟ ಬಿಟ್ಟು ಎಲ್ಲರ ಹುಬ್ಬೇರಿಸಿದ್ದರು. ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿಯೇ (ಬಿಸಿಸಿಐ) ಕಾರಣವೆಂದು ಕೆಲ ವರದಿಗಳು ಹೇಳಿವೆ.
ಜ. 4ರಂದು ತಮ್ಮ ನಾಯಕನ ಪಟ್ಟವನ್ನು ಧೋನಿ ತೊರೆದಿದ್ದರು. ಅದಕ್ಕೂ ಒಂದು ವಾರದ ಮುನ್ನವೇ ಧೋನಿಗೆ ಖುದ್ದು ಭಾರತೀಯ ಕ್ರಿಕೆಟ್ ಮಂಡಳಿಯೇ ನಾಯಕತ್ವ ತೊರೆಯಲು ಸೂಚಿಸಿತ್ತೆಂದು ವರದಿಗಳು ಹೇಳಿವೆ.
ಕಳೆದ ವಾರ ನಾಗ್ಪುರದಲ್ಲಿ ನಡೆದ ಜಾರ್ಖಂಡ್, ಗುಜರಾತ್ ತಂಡಗಳ ನಡುವಿನ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯ ನೋಡಲು ಧೋನಿ ಆಗಮಿಸಿದ್ದರು. ಆಗ, ಭಾರತೀಯ ಕ್ರಿಕೆಟ್ ಮಂಡಳಿಯ ರಾಷ್ಟ್ರೀಯ ತಂಡಗಳ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್. ಕೆ. ಪ್ರಸಾದ್, ಧೋನಿಯವರನ್ನು ಭೇಟಿಯಾಗಿದ್ದರು. ಆ ವೇಳೆ ಅವರಿಬ್ಬರ ನಡುವೆ ನಡೆದ ಮಾತುಕತೆ ಪರಿಣಾಮವೇ ಧೋನಿಯವರು ನಾಯಕತ್ವ ತೊರೆಯಲು ಕಾರಣ ಎನ್ನಲಾಗಿದೆ.
ಅಂದಹಾಗೆ, ಸೀಮಿತ ಓವರ್ ಗಳ ತಂಡಕ್ಕೆ ನಾಯಕರನ್ನಾಗಿ ಟೆಸ್ಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿಯವರನ್ನು ತಂದು ಕೂರಿಸಲು ಕಳೆದ ವರ್ಷ ಸೆಪ್ಟಂಬರ್ ನಲ್ಲಿಯೇ ನಿರ್ಧರಿಸಲಾಗಿತ್ತಂತೆ. ಆಗ ನೂತನವಾಗಿ ರಚನೆಗೊಂಡಿದ್ದ ಆಯ್ಕೆ ಮಂಡಳಿಯು ಏಕದಿನ, ಟಿ20 ತಂಡಗಳಿ ವಿರಾಟ್ ಕೊಹ್ಲಿಯೇ ನಾಯಕರಾಗುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿತ್ತೆಂದು ಹೇಳಲಾಗಿದೆ.