ಬೆಂಗಳೂರು, ಮಾರ್ಚ್ 24: ಬಿಸಿಸಿಐ ಪ್ರಕಟಿಸಿರುವ ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರ ಹೆಸರು ಮಾಯವಾಗಲು ಕಾರಣವೇನು? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರಪ್ರದೇಶದ ಮಾಜಿ ಕೋಚ್ ಉತ್ತರಿಸಿದ್ದಾರೆ. ಗುತ್ತಿಗೆಯಿಂದ ರೈನಾ ಹೊರಬೀಳಲು ಇದೇ ಕಾರಣ ಎಂದು ಮಿಡ್ ಡೇ ವರದಿ ಮಾಡಿದೆ.
ಧೋನಿ ನಾಯಕರಾಗಿದ್ದ ಕಾಲದಲ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿದ್ದ ಸುರೇಶ್ ರೈನಾ ಅವರು ಸುಮಾರು 223 ಏಕದಿನ ಪಂದ್ಯಗಳಿಂದ 5,568 ರನ್ ಹಾಗೂ 65 ಟ್ವೆಂಟಿ-20 ಪಂದ್ಯಗಳಲ್ಲಿ 1,307 ರನ್ ಗಳಿಸಿದ್ದಾರೆ. ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನಗಳಲು ಅನೇಕ ಬಾರಿ ಯತ್ನಿಸಿ ವಿಫಲರಾಗಿದ್ದರು.
30 ವರ್ಷ ವಯಸ್ಸಿನ ರೈನಾ ಅವರು ಆಟಗಾರರ ಗುತ್ತಿಗೆಯಿಂದ ಹೊರಗುಳಿಯಲು ಸ್ವತಃ ರೈನಾ ಅವರ ನಿರಾಸಕ್ತಿಯೇ ಕಾರಣ ಎಂದು ತಿಳಿದು ಬಂದಿದೆ.
ರೈನಾರನ್ನು ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿರುವುದೇಕೆ? ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳು ಕೇಳಿರುವ ಪ್ರಶ್ನೆಯನ್ನು ಉತ್ತರಪ್ರದೇಶದ ಕೋಚ್ ಬಳಿ ಮಿಡ್ ಡೇ ಇಟ್ಟಿತ್ತು. ಇದಕ್ಕೆ ಉತ್ತರಿಸಿದ ಮಾಜಿ ಕೋಚ್, ರೈನಾ ಅವರ ನಿರಾಸಕ್ತಿಯ ವಿಷಯ ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ಮನೆ, ಮಡದಿ, ಮಗು ಎಂದು ಸಂಸಾರದ ಕಡೆ ಹೆಚ್ಚಿನ ಗಮನ ಹರಿಸಿರುವ ರೈನಾ ಆವರು ದೇಶಿ ಕ್ರಿಕೆಟ್ ನ ಪ್ರಮುಖ ಟೂರ್ನಿಗಳನ್ನು ಆಡಿಲ್ಲ. ಈ ಋತುವಿನಲ್ಲಿ ಉತ್ತರಪ್ರದೇಶದ ಪರ ಕೇವಲ ಮೂರು ರಣಜಿ ಪಂದ್ಯಗಳನ್ನು ಆಡಿದ್ದರು. ದೇಶಿ ಟ್ವೆಂಟಿ-20 ಹಾಗೂ ಏಕದಿನ ಟೂರ್ನಮೆಂಟ್ನಿಂದಲೂ ದೂರ ಉಳಿದಿದ್ದರು ಎಂದು ಮಾಜಿ ಕೋಚ್ ಹೇಳಿದ್ದಾರೆ.
ರೈನಾ ಗೃಹಸ್ಥನಾದ ಬಳಿಕ ಅವರ ಆದ್ಯತೆ ಬದಲಾಗಿದೆ. ಅವರು ಕ್ರಿಕೆಟ್ನತ್ತ ಹೆಚ್ಚು ಏಕಾಗ್ರತೆವಹಿ ತ್ತಿಲ್ಲ. ರೈನಾ ಅವರು ಟ್ವೆಂಟಿ-20 ಪಂದ್ಯದತ್ತ ಮಾತ್ರ ಗಮನ ಹರಿಸುತ್ತಿದ್ದಾರೆ. ಐಪಿಎಲ್ನಲ್ಲಿ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕನಾಗಿದ್ದು, ಅವರ ಮುಂದಿನ ಭವಿಷ್ಯವನ್ನು ಐಪಿಎಲ್ನಲ್ಲಿನ ಅವರ ಪ್ರದರ್ಶನ ನಿರ್ಧರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.