ಬೆಂಗಳೂರು, ಏಪ್ರಿಲ್ 8: ಅಂತೂ ಇಂತು, ಆರ್ ಸಿಬಿ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಅದು, ತನ್ನ ತವರಿನ ಅಂಗಳದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 15 ರನ್ ಅಂತರದ ಜಯ ಸಾಧಿಸಿತು.
ಹಾಗೆ ನೋಡಿದರೆ, ರಾಯಲ್ ಚಾಲೆಂಜರ್ಸ್ ತಂಡವು ಈ ಪಂದ್ಯ ಗೆಲ್ಲುವ ಬಗ್ಗೆ ಯಾರಲ್ಲೂ ಗ್ಯಾರಂಟಿ ಇರಲಿಲ್ಲ. ಏಕೆಂದರೆ, ಆ ತಂಡದ ಬ್ಯಾಟಿಂಗ್ ವೈಫಲ್ಯ ಹಾಗೂ ತನ್ನ ಇನಿಂಗ್ಸ್ ನಲ್ಲಿ 157 ರನ್ ಗಳ ಸಾಧಾರಣ ಮೊತ್ತ ದಾಖಲಿಸಿ, ಎದುರಾಳಿಗಳಿಗೆ ಸುಲಭವಾದ ಗುರಿ ಕೊಟ್ಟಿದ್ದರು.[ಸೋಲಿನ ಕಹಿ ಮರೆತ ಆರ್ ಸಿಬಿ; ಡೆಲ್ಲಿ ವಿರುದ್ಧ ರೋಚಕ ಜಯ]
ಹೇಳಿ ಕೇಳಿ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಪಿಚ್. ಆ ಕಾರಣಕ್ಕೇ ಟಾಸ್ ಗೆದ್ದ ಕೂಡಲೇ ನಾಯಕ ವ್ಯಾಟ್ಸನ್, ಬ್ಯಾಟಿಂಗ್ ಆಯ್ದುಕೊಂಡಿದ್ದು. ಆದರೆ, ಅಂದುಕೊಂಡ ಹಾಗೆ ಮಾತ್ರ ತಂಡ ಬ್ಯಾಟ್ ಮಾಡಲಿಲ್ಲ.
ಆದರೇನಂತೆ, ಕರಾರುವಾಕ್ ಬೌಲಿಂಗ್ ಪ್ರದರ್ಶನ ನೀಡಿದ ತಂಡ, ಅರ್ಹ ಗೆಲುವನ್ನು ಪಡೆಯಿತು. ಇದು ಈ ಹೊತ್ತಿಗೆ ಸಮಾಧಾನ ತಂದಿದ್ದರೂ ಆ ತಂಡದ ವ್ಯವಸ್ಥಾಪಕ ಮಂಡಳಿ ಹಾಗೂ ನಾಯಕ ಸುಮ್ಮನೇ ಇರುವ ಮಾತಲ್ಲ.
ಏಕೆಂದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅನುಪಸ್ಥಿತಿ ತಂಡದ ಮೇಲೆ ಬಹುವಾಗಿ ಕಾಡುತ್ತಿದೆ. ಅವರ ಅನುಪಸ್ಥಿತಿಯನ್ನು ಸರಿದೂಗಿಸಬಲ್ಲ ಸಮರ್ಥ ಬ್ಯಾಟ್ಸ್ ಮನ್ ಗಳು ತಂಡದಲ್ಲಿದ್ದಾರೆ. ಆದರೆ, ಅವರಿಂದ ಸರಿಯಾದ ಆಟ ಹೊರಹೊಮ್ಮುತ್ತಿಲ್ಲ. ಅರ್ಥಾತ್, ಅವರಿನ್ನೂ ತಮ್ಮ ಲಯ ಕಂಡುಕೊಂಡಿಲ್ಲ. ಅಷ್ಟೇ ಅಲ್ಲ, ಬೌಲಿಂಗ್ ನಲ್ಲೂ ಇನ್ನಷ್ಟು ಮೊನಚು ಕಂಡುಕೊಳ್ಳಬೇಕಿದೆ.
ಕೇವಲ ಎರಡು ಪಂದ್ಯಗಳಿಗೇ ಇಷ್ಟು ಕಿವಿಮಾತು ಬೇಕಿತ್ತಾ ಎಂದೆನ್ನಿಸಬಹುದು. ಆದರೆ, ನೆನಪಿಡಿ. ಇದು ಐಪಿಎಲ್. ಪ್ರತಿಯೊಂದು ಪಂದ್ಯ ಹಾಗೂ ಆ ಪಂದ್ಯದಲ್ಲಿ ತಂಡದ ಪರ್ಫಾಮನ್ಸ್ ತುಂಬಾನೇ ಮುಖ್ಯ.