ರಾಜ್ ಕೋಟ್, ಏಪ್ರಿಲ್ 18: ಟೀಮ್ ಇಂಡಿಯಾ ಹಾಗೂ ಗುಜರಾತ್ ಲಯನ್ಸ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜ ಅವರು ಗೆಳತಿ ರೀವಾ ಸೋಲಂಕಿ ಅವರನ್ನು ಭಾನುವಾರ ವರಿಸಿದ್ದಾರೆ. ಹರ್ಭಜನ್ ಸಿಂಗ್ ಅವರ ಮದುವೆ ಸಂದರ್ಭದಲ್ಲಿ ಉಂಟಾಗಿದ್ದ ಗಲಭೆ, ಗೊಂದಲದಂತೆ ಜಡ್ಡು ಮದುವೆಯಲ್ಲೂ ಪೊಲೀಸರು ಬಂದು ವಿಚಾರಣೆ ನಡೆಸಿದ ಘಟನೆ ನಡೆದಿದೆ.
ಹರ್ಭಜನ್ ಸಿಂಗ್ ಅವರ ಆಪ್ತ ಅಂಗರಕ್ಷಕರು(ಬೌನ್ಸರ್ ಗಳು) ಹಾಗೂ ವಿಡಿಯೋ ಜನರ್ಲಿಸ್ಟ್ ಗಳ ನಡುವೆ ಭಾರಿ ಮಾತಿನ ಚಕಮಕಿ ನಡೆದಿತ್ತು. [ಹರ್ಭಜನ್ ಮದ್ವೆಯಲ್ಲಿ ಗಲಾಟೆ, ಸ್ಸಾರಿ ಕೇಳಿದ ಭಜ್ಜಿ]
ಇದಲ್ಲದೆ, ಹರ್ಭಜನ್ ಸಿಂಗ್ ಅವರ ಮದುವೆಯಲ್ಲಿ ಸುಮಾರು 113 ಬಗೆಯ ತಂಬಾಕು ಪದಾರ್ಥಗಳನ್ನು ಬಂದಿದ್ದ ಅತಿಥಿಗಳಿಗೆ ನೀಡಲಾಗಿದೆ ಎಂಬ ಆರೋಪ ಹೊರೆಸಿ ಕೆಲ ಸಿಖ್ ಸಂಘಟನೆಗಳು ದೂರು ನೀಡಿದ್ದವು. ಹರ್ಭಜನ್ ಸಿಂಗ್ ನಂತರ ಎಲ್ಲರ ಕ್ಷಮೆಯಾಚಿಸಿದ್ದರು. [ಹರ್ಭಜನ್ ಮದ್ವೆಯಲ್ಲಿ ತಂಬಾಕು, ಸಿಖ್ ಸಮುದಾಯ ಗರಂ]
ಶಾಸ್ತ್ರ, ಸಂಪ್ರದಾಯದಂತೆ ಜಡೇಜ ಅವರು ವಿವಾಹ ಮಂಟಪಕ್ಕೆ ಕುದುರೆ ಮೇಲೆ ಕುಳಿತು ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರೊಬ್ಬರು ಗನ್ ಫೈರಿಂಗ್ ಮಾಡಿದ್ದಾರೆ. ಇದರಿಂದ ಕುದುರೆ ಕೂಡಾ ಕ್ಷಣಕಾಲ ತಬ್ಬಿಗಾಗಿ ಹೋಯಿತಂತೆ. [ಲಕ್ಕಿ ಗರ್ಲ್ ರಿವಾ ಜತೆ ಜಡೇಜ ಮದ್ವೆ ಪೂರ್ವ ಚಿತ್ರಗಳು]
ಈ ರೀತಿ ಗುಂಡು ಹಾರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಗನ್ ಫೈರಿಂಗ್ ಮಾಡಿರುವುದು ಕಾನೂನುಬಾಹಿರ ಎಂದು ದೂರು ದಾಖಲಾಗಿದೆ. ಈಗ ರಾಜ್ಕೋಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಡೇಜ ಅವರು ಕುದುರೆ ಸವಾರಿ ಮಾಡುತ್ತಿದ್ದರು. ವರನ ಕಡೆ ದಿಬ್ಬಣ ಮುಂದೆ ಸಾಗಿತ್ತು. ಕುದುರೆ ಪಕ್ಕದಲ್ಲೇ ಸಂಬಂಧಿಯೊಬ್ಬ ಗನ್ನಲ್ಲಿ 4-5 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಗನ್ ಫೈರಿಂಗ್ ಬಗ್ಗೆ ವಿಡಿಯೋ ಕ್ಲಿಪ್ಪಿಂಗ್ ಗಾಗಿ ಕಾದಿದ್ದಾರೆ.
ಆತ್ಮ ರಕ್ಷಣೆಯ ಹೊರತಾಗಿ ಬೇರಾವುದೇ ಕಾರಣಕ್ಕೆ ಇಂಥ ಗನ್ ಬಳಸುವಂತಿಲ್ಲ. ಅಪರಾಧ ಸಾಬೀತಾದರೆ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ' ಎಂದು ಲೋಧಿಕಾ ಪೊಲೀಸ್ ಅಧಿಕಾರಿ ಮಹೇಂದ್ರ ಸಿಂಗ್ ರಾಣಾ ಹೇಳಿದ್ದಾರೆ ಎಂದು ಐಬಿಎನ್ 7 ವರದಿ ಮಾಡಿದೆ.
ಹಳದಿ ಸಮಾರಂಭ, ಸಂಗೀತ್, ತಲ್ವಾರ್ ಕೌಶಲ್ಯ ನಂತರ ಸಾಂಪ್ರದಾಯ ಬದ್ಧವಾಗಿ ರೀವಾ ಅವರನ್ನು ಜಡೇಜ ವರಿಸಿದ್ದಾರೆ. ಫೆಬ್ರವರಿ 5ರಂದು ಇಬ್ಬರ ವಿವಾಹ ನಿಶ್ಚಿತಾರ್ಥ ನಡೆದಿತ್ತು.