ಬೆಂಗಳೂರು, ಅ.16: ವಿದರ್ಭ ವಿರುದ್ಧದ ರಣಜಿ ಟ್ರೋಫಿ 'ಎ' ಗುಂಪಿನ ಪಂದ್ಯದಲ್ಲಿ ಮನೀಷ್ ಪಾಂಡೆ ಅವರ ಆಕರ್ಷಕ ಶತಕ ಸಿಡಿಸಿದ್ದಾರೆ. ರಾಬಿನ್ ಉತ್ತಪ್ಪ, ಕರುಣ್ ನಾಯರ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ 350 ರನ್ ಗಳಿಸಿ ಆಲೌಟ್ ಆಗಿದೆ. ಎರಡನೇ ದಿನದ ಅಂತ್ಯಕ್ಕೆ ನಿಧಾನಗತಿಯಲ್ಲಿ ಚೇಸ್ ಮಾಡಿದ ವಿದರ್ಭ 172/2 ಸ್ಕೋರ್ ಮಾಡಿದೆ.
ವಿದರ್ಭ ಪರ ಕರ್ನಾಟಕದಿಂದ ವಲಸೆ ಹೋಗಿರುವ ಗಣೇಶ್ ಸತೀಶ್ ಅವರು 81ರನ್ ಗಳಿಸಿ ಅಜೇಯರಾಗಿ ಉಳಿದಿದ್ದರೆ, ವಾಸೀಂ ಜಾಫರ್ 68ರನ್ ಗಳಿಸಿ ಔಟಾದರು. ತಮಿಳುನಾಡಿನಿಂದ ವಲಸೆ ಬಂದಿರುವ ಎಸ್ ಬದರೀನಾಥ್ ಅವರು 21 ರನ್ ಗಳಿಸಿ ಆಡುತ್ತಿದ್ದಾರೆ. 2 ದಿನ ಬಾಕಿ ಇದ್ದು, ವಿದರ್ಭ 178ರನ್ ಹಿಂದಿದೆ.
ಕೆಎಲ್ ರಾಹುಲ್ ವಿಫಲ: ತಂಡದ ಮೊತ್ತ 49ರನ್ ಆಗುವಷ್ಟರಲ್ಲೇ 21 ರನ್ ಗಳಿಸಿದ್ದ ಕೆಎಲ್ ರಾಹುಲ್ ಅವರು ಫಜಲ್ ಗೆ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಉತ್ತಮ ತಯಾರಿ ನಡೆಸಲು ಯೋಜಿಸಿದ್ದ ರಾಹುಲ್ ಗೆ ನಿರಾಶೆಯಾಗಿದೆ.
ರಾಬಿನ್ ಉತ್ತಪ್ಪ 59ರನ್ ಗಳಿಸಿ ತಂಡಕ್ಕೆ ಬಲ ತಂದರು. ಉತ್ತಮವಾಗಿ ಆಡುತ್ತಿದ್ದ ಸಮರ್ಥ್ 20ರನ್ ಗಳಿಸಿ ಔಟಾದರು. ಉತ್ತಪ್ಪ ಔಟಾದಾಗ ತಂಡದ ಮೊತ್ತ 3/118 ಆಗಿತ್ತು.
ಕರುಣ್ ನಾಯರ್ 58 ರನ್ ಗಳಿಸಿ ಮನೀಶ್ ಪಾಂಡೆ 104 ರನ್ (163 ಎಸೆತ, 13x4, 1x6, 211 ನಿಮಿಷ) ಸಾಥ್ ನೀಡಿದರು. ಮೊದಲ ಇನಿಂಗ್ಸ್ 89.5 ಓವರ್ಗಳಲ್ಲಿ 6 ವಿಕೆಟ್ಗೆ 298 ಮೊದಲ ದಿನದ ಅಂತ್ಯಕ್ಕೆ ಗಳಿಸಿದ್ದ ಕರ್ನಾಟಕ ಎರಡನೇ ದಿನದ ಆರಂಭದಲ್ಲೇ ವಿಕೆಟ್ ಕಳೆದುಕೊಂಡು 350 ರನ್ನಿಗೆ ಆಲೌಟ್ ಆಗಿದೆ.
ವಿದರ್ಭ: ಎಸ್ ಬದ್ರಿನಾಥ್ (ನಾಯಕ), ಗಣೇಶ್ ಸತೀಶ್, ವಾಸಿಂ ಜಾಫರ್, ಶಲಭ್ ಶ್ರೀವಾಸ್ತವ, ಸ್ವಪ್ನಿಲ್ ಬಂಡಿವರ್, ಆದಿತ್ಯ ಶಾನ್ವಾರ್, ರವಿ ಠಾಕೂರ್, ಜಿತೇಶ್ ಶರ್ಮ(ವಿಕೆಟ್ ಕೀಪರ್), ಆದಿತ್ಯ ಸರ್ವಾತೆ, ಶ್ರೀಕಾಂತ್ ವಾಘ್, ಅಕ್ಷರ್ ವಾಖರೆ. (ಒನ್ ಇಂಡಿಯಾ ಸುದ್ದಿ)