ಹುಬ್ಬಳ್ಳಿ, ನ.24: ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರ ರಣಜಿ ದಾಖಲೆಯನ್ನು ಕರ್ನಾಟಕದ ರಾಬಿನ್ ಉತ್ತಪ್ಪ ಅವರು ಸಮಗಟ್ಟಿದ್ದಾರೆ. ದೆಹಲಿ ವಿರುದ್ಧ ಇಲ್ಲಿನ ರಾಜನಗರ ಕ್ರೀಡಾಂಗಣದಲ್ಲಿ ನಡೆದಿರುವ ಎ ಗುಂಪಿನ ಲೀಗ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ದೆಹಲಿ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕಕ್ಕೆ ರಾಬಿನ್ ಉತ್ತಪ್ಪ ಆಸರೆಯಾದರು. ಆರ್ ಸಮರ್ಥ್ ವಿಕೆಟ್ ಬಿದ್ದ ತಕ್ಷಣ ಕಣಕ್ಕಿಳಿದ ಉತ್ತಪ್ಪ ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದರು.
ಕೊನೆಗೆ ರಾಬಿನ್ ಉತ್ತಪ್ಪ 148 ರನ್ (141 ಎಸೆತಗಳು, 16 X4,6X6) ಗಳಿಸಿ ಔಟಾದರು. ಇದು ಅವರ 20ನೇ ಪ್ರಥಮ ದರ್ಜೆ ಶತಕವಾಗಿದೆ. ರಣಜಿಯಲ್ಲಿ 17ನೇ ಶತಕವಾಗಿದೆ. ಇದರೊಂದಿಗೆ ಅವರು 17 ಶತಕ ದಾಖಲಿಸಿದ ರಾಹುಲ್ ದ್ರಾವಿಡ್ ದಾಖಲೆಯನ್ನು ಸಮಗಟ್ಟಿದರು. 26 ಶತಕ ಸಿಡಿಸಿರುವ ಬ್ರಿಜೇಶ್ ಪಟೇಲ್ ಅವರು ಅಗ್ರಸ್ಥಾನದಲ್ಲಿದ್ದಾರೆ.
ರಾಬಿನ್ ಹ್ಯಾಟ್ರಿಕ್: ಬಲಗೈ ಬ್ಯಾಟ್ಸ್ ಮನ್ ರಾಬಿನ್ ಉತ್ತಪ್ಪ ಅವರು ಸತತವಾಗಿ ಮೂರು ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ರಾಜಸ್ಥಾನ ವಿರುದ್ಧ 160ರನ್, ಒಡಿಶಾ ವಿರುದ್ಧ 148ರನ್ ಹಾಗೂ ದೆಹಲಿ ವಿರುದ್ಧ 148ರನ್ ಬಾರಿಸಿದ್ದಾರೆ.
ಇದೇ ರೀತಿಯ ಸಾಧನೆ ಮಾಡಿರುವ ರಾಹುಲ್ ದ್ರಾವಿಡ್ ಹಾಗೂ ಬ್ರಿಜೇಶ್ ಪಟೇಲ್ ಅವರ ಸಮಕ್ಕೆ 30 ವರ್ಷ ವಯಸ್ಸಿನ ರಾಬಿನ್ ನಿಂತಿದ್ದಾರೆ.
* ಪಟೇಲ್ ಅವರು 100 ರನ್ (ಉತ್ತರ ಪ್ರದೇಶ ವಿರುದ್ಧ 1977/78), 100 (ಗೋವಾ, 1978/79), 126 (ಆಂಧ್ರಪ್ರದೇಶ, 1978/79)
* ರಾಹುಲ್ ದ್ರಾವಿಡ್ 134(ಬೆಂಗಾಳ, 1990/91), 126 (ಗೋವಾ, 1991/92), 128 (ಕೇರಳ, 1991/92)
ದ್ರಾವಿಡ್ ಅವರು 48 ರಣಜಿ ಪಂದ್ಯಗಳಲ್ಲೇ 17 ಶತಕ ಗಳಿಸಿದ್ದರೆ, ರಾಬಿನ್ ಉತ್ತಪ್ಪ ಆವರು 90 ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ.
ಕರ್ನಾಟಕದ ಪರ ಟಾಪ್ 3 ಶತಕ ಸಾಧನೆ
* 26 ಬ್ರಿಜೇಶ್ ಪಟೇಲ್ (104 ಪಂದ್ಯ)
* 17 ರಾಬಿನ್ ಉತ್ತಪ್ಪ (90), ರಾಹುಲ್ ದ್ರಾವಿಡ್ (48)
* 15-ಜಿಆರ್ ವಿಶ್ವನಾಥ್ (93)
ರಾಬಿನ್ ಉತ್ತಪ್ಪ ಒಂದೇ ಓವರ್ನಲ್ಲಿ 32 ರನ್ ಚೆಚ್ಚಿದ್ದು ಕೂಡಾ ದಾಖಲೆಯಾಗಿದೆ. 61ನೇ ಓವರ್ ಎಸೆದ ದೆಹಲಿಯ ಧ್ರುವ ಶೋರೆ ಬೌಲಿಂಗ್ನಲ್ಲಿ 4 ಸಿಕ್ಸರ್, 2 ಬೌಂಡರಿ ಬಾರಿಸಿದರು. ಮೊದಲ 3 ಎಸೆತಗಳಲ್ಲಿ ಸಿಕ್ಸರ್ ಸಿಡಿದರೆ, ನಂತರ ಸತತ 2 ಬೌಂಡರಿ ಬಂದಿದೆ. ಕೊನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದರು. ಮೊದಲ ಸಿಕ್ಸರ್ನಲ್ಲೇ ಉತ್ತಪ್ಪ ಶತಕ ಪೂರೈಸಿದರು. 1984-85ರಲ್ಲಿ ರವಿಶಾಸ್ತ್ರಿ ಓವರ್ನ ಎಲ್ಲ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ 36 ರನ್ ಕಸಿದ ಬಳಿಕ ಇದು ರಣಜಿಯ ದುಬಾರಿ ಓವರ್ ಆಗಿದೆ.
ಮಯಾಂಕ್ ಪ್ರಥಮ ಶತಕ: ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ಅವರು 17 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದ್ದರೂ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ.ಇಲ್ಲಿ ತನಕ 90 ರನ್ ಅವರ ಹಿಂದಿನ ಜೀವನಶ್ರೇಷ್ಠ ಸಾಧನೆ ಆಗಿತ್ತು. 7 ಅರ್ಧಶತಕ ದಾಖಲಿಸಿದ್ದ ಮಾಯಂಕ್ ಅವರು ದೆಹಲಿ ವಿರುದ್ಧ ಶತಕ ಗಳಿಸಿ ರಣಜಿಯ ಪ್ರಥಮ ಶತಕದ ಸಾಧನೆ ಮಾಡಿದರು. (ಒನ್ ಇಂಡಿಯಾ ಸುದ್ದಿ)