ಮೈಸೂರು, ಅ.26: ಕರ್ನಾಟಕ ರಣಜಿ ತಂಡ ತವರು ನೆಲದಲ್ಲೇ ತಲೆ ತಗ್ಗಿಸುವಂಥ ಘಟನೆ ನಡೆದಿದೆ. ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ಕಂಡು ಬಂದ ಪ್ರೇಕ್ಷಕರ ವರ್ತನೆಯಿಂದ ವಿನಯ್ ಕುಮಾರ್ ಪಡೆ ಬೇಸತ್ತು, ಪಂದ್ಯಗಳನ್ನು ಶಿಫ್ಟ್ ಮಾಡುವಂತೆ ಕೋರಲು ಮುಂದಾಗಿದ್ದಾರೆ. ಹರ್ಯಾಣದ ನಾಯಕ ಸೆಹ್ವಾಗ್ ಗೆ ಸಿಕ್ಕ ಮರ್ಯಾದೆ ಕೊಡಗಿನ ವೀರ ರಾಬಿನ್ ಉತ್ತಪ್ಪಗೆ ಸಿಗಲಿಲ್ಲ ಏಕೆ? ಇಲ್ಲಿದೆ ನಮ್ಮ ಪ್ರತಿನಿಧಿ ಕಂಡ ಸತ್ಯ.
ತವರು ನೆಲದಲ್ಲಿ ಆಡುವಾಗ ಸಹಜವಾಗಿ ಕರ್ನಾಟಕ ಮೇಲುಗೈ ಸಾಧಿಸುತ್ತಾ ಬಂದಿದೆ. ಕಳೆದ ಎರಡು ಸೀಸನ್ ಗಳಿಂದ ಸೋಲು ಕಾಣದೆ ಗೆಲುವು ಅಥವಾ ಡ್ರಾ ಮೂಲಕ ರಣಜಿ ಟ್ರೋಫಿಗೆ ಮುತ್ತಿಟ್ಟಿದ್ದ ವಿನಯ್ ಅವರ ತಂಡ ಈ ಬಾರಿ ನಾಕೌಟ್ ಹಂತ ತಲುಪಲು ಸ್ವಲ್ಪ ಹೆಚ್ಚಿನ ಶ್ರಮ ಪಡಬೇಕಾಗಿದೆ. [ಹರ್ಯಾಣ ವಿರುದ್ಧ ಕರ್ನಾಟಕಕ್ಕೆ ಸಿಕ್ಕಿದ್ದು 1 ಅಂಕ]
ಹರ್ಯಾಣ ವಿರುದ್ಧ ಭಾನುವಾರ ರಾಬಿನ್ ಉತ್ತಪ್ಪ, ಸಮರ್ಥ್, ಗಾಯಾಳುವಾಗಿದ್ದ ಮನೀಶ್ ಪಾಂಡೆ ಅವರು ದಿಟ್ಟ ಹೋರಾಟ ನೀಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಅದರೆ, ಆಟದ ನಡುವೆ ಮೊದಲ ದಿನದಿಂದಲೂ ಕರ್ನಾಟಕ ಆಟಗಾರರಿಗಿಂತ ಹರ್ಯಾಣದ ಪರ ಮೈಸೂರಿನ ಪ್ರೇಕ್ಷಕರು ನಿಂತಿದ್ದು ಅಚ್ಚರಿಯಾಗಿತ್ತು. ಸೆಹ್ವಾಗ್ ಗೆ ಸಿಗುತ್ತಿದ್ದ ಸ್ವಾಗತ, ನಮ್ಮ ಆಟಗಾರರಿಗೆ ಸಿಗಲಿಲ್ಲ.
ಸ್ವಾಗತ ಹಾಳಾಗಿ ಹೋಗಲಿ, ಆಟಗಾರರನ್ನು ಏಕವಚನದಲ್ಲಿ ಕೂಗಿ ಕರೆದು ಲೇವಡಿ ಮಾಡುತ್ತಿದ್ದ ಒಂದು ವರ್ಗ ಪದೇ ಪದೇ ಕೀಟಲೆ ಮಾಡುತ್ತಲೇ ಇತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಸೆಹ್ವಾಗ್ ಕ್ಯಾಚ್ ಡ್ರಾಪ್ ಮಾಡುವಾಗ ಪ್ರೇಕ್ಷಕರು ಸಂಭ್ರಮಿಸಿದರು. ಸೆಹ್ವಾಗ್ ಕೂಡಾ ಇದಕ್ಕೆ ಪೂರಕವಾಗಿ ಶತಕ ಸಿಡಿಸಿದರು.
ಉತ್ತಪ್ಪ ದೂರು: ನಮ್ಮವರೇ(ತವರು ನೆಲದ ಪ್ರೇಕ್ಷಕರು) ನಮಗೆ ಬೆಂಬಲ ನೀಡದಿದ್ದರೆ ಹೇಗೆ? ಸೆಹ್ವಾಗ್ ರಂಥ ದಿಗ್ಗಜ ಆಟಗಾರನ ಆಟಕ್ಕೆ ಮೆಚ್ಚುಗೆ ಸೂಚಿಸುವುದು ತಪ್ಪಲ್ಲ. ಅದರೆ, ಸ್ಥಳೀಯ ಆಟಗಾರರನ್ನು ಟೀಕಿಸುವುದು ಅದರಲ್ಲೂ ಬೌಂಡರಿಯಲ್ಲಿ ಫೀಲ್ಡ್ ಮಾಡುವಾಗ ತೊಂದರೆ ಮಾಡುವುದು ಸಭ್ಯತೆಯ ಲಕ್ಷಣವಲ್ಲ.ಈ ರೀತಿಯ ಘಟನೆಯಿಂದ ಮಾನಸಿಕವಾಗಿ ಆಟಗಾರರು ಕುಗ್ಗಿಹೋಗುತ್ತಾರೆ ಎಂದು ರಾಬಿನ್ ಉತ್ತಪ್ಪ ದೂರಿದ್ದಾರೆ.
ಕೆಎಸ್ ಸಿಎ ಪ್ರತಿಕ್ರಿಯೆ: ರಾಬಿನ್ ಅವರ ಪ್ರತಿಕ್ರಿಯೆ ಅನಿರೀಕ್ಷಿತವಾಗಿದ್ದು, ಅಚ್ಚರಿ ಮೂಡಿಸುತ್ತದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಬಂದ ಮೇಲೆ ನಮಗೆ ತಿಳಿಯಿತು. ಕೆಲ ಪ್ರೇಕ್ಷಕರಿಂದ ಆದ ತೊಂದರೆಯಿಂದ ಪಂದ್ಯಗಳನ್ನು ಶಿಫ್ಟ್ ಮಾಡುವಂತೆ ಕೇಳುವುದು ಸರಿಯಲ್ಲ. ಈ ರೀತಿ ಹೇಳಿಕೆಯಿಂದ ಮೈಸೂರಿನ ಗೌರವಕ್ಕೆ ಧಕ್ಕೆ ತರುತ್ತದೆ. ಈ ಬಗ್ಗೆ ಯಾವುದೇ ಅಧಿಕೃತ ಮನವಿ ನಮಗೆ ಸಿಕ್ಕಿಲ್ಲ ಎಂದು ಕೆಎಸ್ ಸಿಎ ಅಧಿಕಾರಿ ಬಾಲಚಂದರ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ನವೆಂಬರ್ 7 ರಿಂದ 10 ರ ತನಕ ಗಂಗೋತ್ರಿ ಗ್ಲೇಡ್ ಮೈದಾನದಲ್ಲಿ ನಡೆಯಲಿದ್ದು ಒಡಿಶಾ ವಿರುದ್ಧ ಕರ್ನಾಟಕ ಸೆಣೆಸಲಿದೆ.