ಗುವಾಹಟಿ, ಅ. 01: ಹಾಲಿ ಚಾಂಪಿಯನ್ ಕರ್ನಾಟಕ ಗುರುವಾರ ಆರಂಭಗೊಂಡ ಎ ಗುಂಪಿನ ಮೊದಲ ಪಂದ್ಯದಲ್ಲೇ ಆಘಾತ ಅನುಭವಿಸಿದೆ. ಅಸ್ಸಾಂ ವಿರುದ್ಧದ ಪಂದ್ಯದಲ್ಲಿ 187 ಸ್ಕೋರಿಗೆ ವಿನಯ್ ಕುಮಾರ್ ಪಡೆ ಆಲೌಟ್ ಆಗಿದೆ.
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಉಪಯೋಗಿಸಿಕೊಳ್ಳಲಿಲ್ಲ. ಆರ್ ಸಮರ್ಥ್ ಕೇವಲ 5 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮಾಯಾಂಕ್ ಆಗರವಾಲ್ ಅವರು ತಾಳ್ಮೆಯುತ ಆಟವಾಡಿ ವಿಕೆಟ್ ಕಾಯ್ದುಕೊಂಡು 36ರನ್ (82 ಎಸೆತ) ಗಳಿಸಿದರು. ಭರವಸೆಯ ಆಟಗಾರ ರಾಬಿನ್ ಉತ್ತಪ್ಪ 11ರನ್ ಗೆ ಕುಸಿದರೆ, ಸಿಎಂ ಗೌತಮ್ ಶೂನ್ಯ ಸುತ್ತಿದರು.[ರಣಜಿ ಟ್ರೋಫಿ ಹೊಸ ಸೀಸನ್ ವೇಳಾಪಟ್ಟಿ, ಗೈಡ್]
ಕರುಣ್ ನಾಯರ್ ಕೂಡಾ 14ರನ್ ಗಳಿಸಿ ಸೈಯದ್ ಗೆ ವಿಕೆಟ್ ಒಪ್ಪಿಸಿದರು. ಶಿಶಿರ್ ಭವಾನೆ 6 ಬೌಂಡರಿ ಇದ್ದ 65 ರನ್ (143ಎಸೆತ) ಗಳಿಸದಿದ್ದರೆ ಕರ್ನಾಟಕದ ಸ್ಥಿತಿ ಇನ್ನಷ್ಟು ಶೋಚನೀಯವಾಗುತ್ತಿತ್ತು. 75.2ಓವರ್ ಗಳಲ್ಲಿ 187 ಸ್ಕೋರಿಗೆ ಕರ್ನಾಟಕ ಎಲ್ಲಾ ವಿಕೆಟ್ ಕಳೆದುಕೊಂಡಿತು. ಅಸ್ಸಾಂ ಪರ ಸೈಯದ್ ಮೊಹಮ್ಮದ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ 18.2 ಓವರ್ ಗಳಲ್ಲಿ 44ರನ್ನಿತ್ತು 7 ವಿಕೆಟ್ ಕಿತ್ತರು.
187ರನ್ ಬೆನ್ನು ಹತ್ತಿ ಇನ್ನಿಂಗ್ಸ್ ಆರಂಭಿಸಿದ ಅಸ್ಸಾಂ ತಂಡ ಕೂಡಾ ಆರಂಭಿಕ ಆಘಾತ ಅನುಭವಿಸಿತು. ಕರ್ನಾಟಕದ ನಾಯಕ ವಿನಯ್ ಕುಮಾರ್ ಅವರು ಎಸೆದ 5 ಓವರ್ ಗಳಲ್ಲೇ ಒಂದು ವಿಕೆಟ್ ಉದುರಿಸಿದರು. ದಿನದ ಅಂತ್ಯಕ್ಕೆ ಅಸ್ಸಾಂ 12 ಓವರ್ ಗಳಲ್ಲಿ 21ರನ್ ಗಳಿಸಿದೆ.
ತಂಡಗಳು:
ಅಸ್ಸಾಂ: ಅಬು ನೆಚಿಮ್ ಅಹ್ಮದ್, ಗೋಕುಲ್ ಶರ್ಮ (ನಾಯಕ), ಕೆಬಿ ಅರುಣ್ ಕಾರ್ತಿಕ್ (ವಿಕೆಟ್ ಕೀಪರ್), ಅಮಿತ್ ವರ್ಮಾ(ಕರ್ನಾಟಕದಿಂದ ವಲಸೆ ಹೋಗಿರುವ ಆಟಗಾರ), ಅರುಪ್ ದಾಸ್, ಕೃಷ್ಣ ದಾಸ್, ಪಲ್ಲವ್ ಕುಮಾರ್ ದಾಸ್, ಸರುಪಮ್ ಪರ್ಕಯಸ್ತಾ, ಶಿವಶಂಕರ್ ರಾಯ್, ಸೈಯದ್ ಮೊಹಮ್ಮದ್, ತರ್ಜಿಂದರ್ ಸಿಂಗ್
ಕರ್ನಾಟಕ: ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮಿಥುನ್ ಎ , ಶರತ್ ಎಚ್.ಎಸ್, ಶ್ರೇಯಸ್ ಗೋಪಾಲ್, ಸಿಎಂ ಗೌತಮ್ (ವಿಕೆಟ್ ಕೀಪರ್), ಸುಚಿತ್ ಜೆ, ಮಾಯಾಂಕ್ ಅಗರವಾಲ್, ಶಿಶಿರ್ ಭವಾನೆ, ಸಮರ್ಥ್ ಆರ್. (ಒನ್ ಇಂಡಿಯಾ ಸುದ್ದಿ)