ಮೈಸೂರು, ಅ. 22: ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಕರ್ನಾಟಕ ಹಾಗೂ ಹರ್ಯಾಣ ವಿರುದ್ಧ ಗುರುವಾರ ಪಂದ್ಯ ಆರಂಭವಾಗಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಹರ್ಯಾಣ ತಂಡ ಭೋಜನ ವಿರಾಮಕ್ಕೆ 101/2 ಸ್ಕೋರ್ ಮಾಡಿತ್ತು. ನಾಯಕ ವಿರೇಂದ್ರ ಸೆಹ್ವಾಗ್ ಭರ್ಜರಿ ಶತಕ ಗಳಿಸಿದ್ದಾರೆ. ಕೊನೆಗೆ 87 ಓವರ್ ಗಳಲ್ಲಿ 319/8 ವಿಕೆಟ್ ಕಳೆದುಕೊಂಡಿದೆ.
ಟಾಸ್ ಗೆದ್ದ ಹರ್ಯಾಣ ತಂಡದ ನಾಯಕ ಸೆಹ್ವಾಗ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹರ್ಯಾಣ ತಂಡದ ಆರಂಭಿಕ ಆಟಗಾರ ಆರ್ ವಿ ದಿವಾನ್ 9ರನ್ ಗಳಿಸಿ ಶರತ್ ಬೌಲಿಂಗ್ ನಲ್ಲಿ ಕರುಣ್ ನಾಯರ್ ಗೆ ಕ್ಯಾಚಿತ್ತು ಔಟಾದರು. ಬಿಶ್ನೋಯ್ 13 ರನ್ ಗಳಿಸಿ ಡೇವಿಡ್ ಮಥಾಯಿಸ್ ಗೆ ಬಲಿಯಾದರು. [ಅಂಕಿ ಸಂಖ್ಯೆಗಳಲ್ಲಿ ಸೆಹ್ವಾಗ್ ಸೂಪರ್ ವೃತ್ತಿ ಬದುಕು]
ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ವಿರೇಂದ್ರ ಸೆಹ್ವಾಗ್ ಅವರು ಭೋಜನ ವಿರಾಮದ ವೇಳೆಗೆ ಆಕರ್ಷಕ ಅರ್ಧಶತಕ ಸಿಡಿಸಿದ್ದರು.(60 ಎಸೆತಗಳಲ್ಲಿ 55ರನ್). ಜೆಜೆ ಯಾದವ್ ಅವರು 52 ರನ್ ಗಳಿಸಿದ್ದಾರೆ (45.1 ಓವರ್ ಗಳ ನಂತರ 178/2)
ಭೋಜನ ವಿರಾಮದ ನಂತರ ಭರ್ಜರಿ ಆಟ ಪ್ರದರ್ಶಿಸಿದ ಸೆಹ್ವಾಗ್ ಅವರು 121 ಎಸೆತಗಳಲ್ಲಿ 101 (11x4,3x6) ಗಳಿಸಿದ್ದರು. ನಂತರ 136 ರನ್ (170 ಎಸೆತ, 16x4, 3x4) ಗಳಿಸಿ ಔಟಾದರು, ಜೆಜೆ ಯಾದವ್ ಕೂಡಾ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸಿ 100ರನ್ (173ಎಸೆತ, 11x4,1x6) ಗಳಿಸಿ ಔಟಾದರು. ಕೊನೆಗೆ 87 ಓವರ್ ಗಳಲ್ಲಿ 319/8 ವಿಕೆಟ್ ಕಳೆದುಕೊಂಡಿದೆ. ಕರ್ನಾಟಕ ಪರ ಶರತ್ 4 ವಿಕೆತ್, ಡೇವಿಡ್ ಮಥಾಯಿಸ್ 2, ಸುಚಿತ್ ಹಾಗೂ ವಿನಯ್ ಕುಮಾರ್ ತಲಾ 1 ವಿಕೆಟ್ ಪಡೆದರು.
ಅಂಕಪಟ್ಟಿಯಲ್ಲಿ ಹರ್ಯಾಣ ಕೊನೆ ಸ್ಥಾನದಲ್ಲಿದ್ದರೆ, ಕರ್ನಾಟಕ ಇನ್ನೂ ಗೆಲುವು ಕಾಣಬೇಕಿದೆ. ವಿದರ್ಭ ವಿರುದ್ಧದ ಕಳೆದ ಪಂದ್ಯವನ್ನು ಕರ್ನಾಟಕ ಡ್ರಾ ಮಾಡಿಕೊಂಡಿದೆ.
ಅಕ್ಟೋಬರ್ 20ರಂದು 37ನೇ ಹುಟ್ಟುಹಬ್ಬದ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸೆಹ್ವಾಗ್ ಅವರು ಗುಡ್ ಬೈ ಹೇಳಿದರು. ಎರಡು ದಿನಗಳ ನಂತರ ದಸರಾ ಮೂಡ್ ನಲ್ಲಿರುವ ಮೈಸೂರಿಗೆ ಬಂದ ದೆಹಲಿ ನವಾಬ ಸೆಹ್ವಾಗ್ ಅವರು ಪ್ರೇಕ್ಷಕರಿಗೆ ರಸದೌತಣ ನೀಡಿದ್ದಾರೆ. ಪ್ರಸಕ್ತ ರಣಜಿ ಋತುವಿನಲ್ಲಿ ಮಹಾರಾಷ್ಟ್ರ ವಿರುದ್ಧ 92 ಹಾಗೂ ದೆಹಲಿ ವಿರುದ್ಧ 37 ಮತ್ತು 51ರನ್ ಗಳಿಸಿದ್ದರು.
ತಂಡಗಳು:
ಕರ್ನಾಟಕ: ವಿನಯ್ ಕುಮಾರ್ (ನಾಯಕ), ರಾಬಿನ್ ಉತ್ತಪ್ಪ, ಕರುಣ್ ನಾಯರ್, ಮನೀಶ್ ಪಾಂಡೆ, ಶರತ್ ಎಚ್ ಎಸ್, ಶ್ರೇಯಸ್ ಗೋಪಾಲ್, ಕೆಎಲ್ ರಾಹುಲ್, ಸಿಎಂ ಗೌತಮ್ (ವಿಕೆಟ್ ಕೀಪರ್), ಡೇವಿಡ್ ಮಾಥಾಯಿಸ್, ಜೆ ಸುಚಿತ್, ಆರ್ ಸಮರ್ಥ್.
ಹರ್ಯಾಣ: ವಿರೇಂದ್ರ ಸೆಹ್ವಾಗ್(ನಾಯಕ), ಎನ್ ಆರ್ ಸೈನಿ(ವಿಕೆಟ್ ಕೀಪರ್), ಎಚ್ ವಿ ಪಟೇಲ್, ಎಎಚ್ ಹೂಡಾ, ಜೆಜೆ ಯಾದವ್, ಎಸ್ಆರ್ ರಾಣಾ, ಆರ್ ಎಂ ದಾಗರ್, ಆರ್ ವಿ ದಿವಾನ್, ಸಿಕೆ ಬಿಶ್ನೋಯ್, ಎಸ್ ಜೆ ಬಾಧ್ವಾರ್, ಎಚ್ ಜೆ ರಾಣಾ.
(ಒನ್ ಇಂಡಿಯಾ ಸುದ್ದಿ)