ದುಬೈ, ಫೆ. 04: ಐಸಿಸಿ ನೇಮಿಸಿರುವ ಭ್ರಷ್ಟಾಚಾರ ಮೇಲ್ವಿಚಾರಣೆ ಸಮೂಹಕ್ಕೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಸದಸ್ಯರಾಗಿ ಗುರುವಾರ ನೇಮಿಸಲಾಗಿದೆ.
ಈ ಮೇಲ್ವಿಚಾರಣೆ ಗುಂಪಿನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಲ್ಲದೆ, ಕಾನೂನು ತಜ್ಞರಾದ ಲೂಯಿಸ್ ವೆಸ್ಟನ್, ಸ್ವತಂತ್ರ ಭ್ರಷ್ಟಾಚಾರ ವಿರೋಧಿ ಸಮಿತಿಯ ಸಲಹೆಗಾರ ಜಾನ್ ಅಬಾಟ್, ಭ್ರಷ್ಟಾಚಾರ ವಿರೋಧಿ ಘಟಕದ ಚೇರ್ಮನ್ ಸರ್ ರಾನಿ ಫ್ಲಾಂಗನ್ ಹಾಗೂ ಐಸಿಸಿ ಸಿಇಒ ಡೇವಿಡ್ ರಿಚರ್ಡ್ ಸನ್ ಅವರಿದ್ದಾರೆ. [ಸಚಿನ್, ದ್ರಾವಿಡ್, ಗಂಗೂಲಿಗೆ ಸಿಗಲಿರುವ ಗೌರವ ಧನವೆಷ್ಟು?]
ವರ್ಷಕ್ಕೊಮ್ಮೆ ಸಭೆ ಸೇರಿ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಎಲ್ಲಾ ಸ್ವತಂತ್ರ ಸಮಿತಿಗಳು ಕಲೆಹಾಕಿರುವ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಅಗತ್ಯವಿರುವ ಕಡೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಘಟಕದ ಚೇರ್ಮನ್ ಅವರ ಸಲಹೆ ಮೇರೆಗೆ ಈ ಗುಂಪು ಕಾರ್ಯನಿರ್ವಹಿಸಲಿದೆ.[ರಾಹುಲ್ ದ್ರಾವಿಡ್ ಹಾಡಿ ಹೊಗಳಿದ ಪಾಕಿಸ್ತಾನಿ ಕ್ರಿಕೆಟರ್]
ಸದ್ಯ ರಾಹುಲ್ ದ್ರಾವಿಡ್ ಅವರು ಅಂಡರ್ 19 ವಿಶ್ವಕಪ್ ನಲ್ಲಿ ಆಡುತ್ತಿರುವ ಟೀಂ ಇಂಡಿಯಾಕ್ಕೆ ಕೋಚ್ ಆಗಿ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಅವರು ನಾಯಕರಾಗಿ, ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಭ್ರಷ್ಟಾಚಾರದ ಆರೋಪ ಹೊತ್ತು ಅಮಾನತುಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು. (ಪಿಟಿಐ)