ಬೆಂಗಳೂರು, ಜು.02: ನನ್ನ ನೈಜ ಆಟ ಪ್ರದರ್ಶಿಸಲು ಓಪನಿಂಗ್ ಸ್ಥಾನವೇ ನನಗೆ ಸೂಕ್ತ. ಜಿಂಬಾಬ್ವೆ ಸರಣಿ ವೇಳೆಯಲ್ಲಿ ನಾನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಬಯಸುತ್ತೇನೆ ಎಂದು ಕರ್ನಾಟಕದ ರಾಬಿನ್ ಉತ್ತಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತಪ್ಪ ಕೋರಿಕೆ ಮನ್ನಿಸಿ ಟೀಂ ಮ್ಯಾನೇಜ್ಮೆಂಟ್ ಓಪನರ್ ಆಗಿ ಕಣಕ್ಕಿಳಿಸುವುದೇ ಕಾದು ನೋಡಬೇಕಿದೆ.
ಬಹುದಿನಗಳ ಬಳಿಕ ಮತ್ತೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದಕ್ಕೆ ರಾಬಿನ್ ಉತ್ತಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೆಚ್ಚಿನ ಪರಿಶ್ರಮ ವಹಿಸಬೇಕು ಹಾಗೂ ಉತ್ತಮ ಪ್ರದರ್ಶನ ನೀಡಬೇಕು ಎಂಬ ಅನಿವಾರ್ಯತೆ ಇದೆ. [ರಾಹುಲ್ ದ್ರಾವಿಡ್ ಕೋಚಿಂಗ್ ಮಾಡಲು ತಂಡ ಪ್ರಕಟ]
ಜಿಂಬಾಬ್ವೆ ಪ್ರವಾಸ ಬೆಳೆಸಲಿರುವ ಭಾರತ ತಂಡ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು, ಎರಡು ಟ್ವೆಂಟಿ20 ಪಂದ್ಯಗಳನ್ನು ಆಡಲಿದೆ. ಮೊದಲ ಏಕದಿನ ಪಂದ್ಯ ಜುಲೈ 10ರಂದು ನಡೆಯಲಿದೆ.
ತಂಡದಲ್ಲಿ ಯುವ ಆಟಗಾರರಿದ್ದು, ಹೆಚ್ಚಿನ ಸಮತೋಲನದಿಂದ ಕೂಡಿದೆ. ತೆಂಡೂಲ್ಕರ್, ಧೋನಿ, ದ್ರಾವಿಡ್ ಅವರ ಮಾರ್ಗದರ್ಶನ ನನ್ನ ನಾಯಕತ್ವದ ಆರಂಭಕ್ಕೆ ಶ್ರೀರಕ್ಷೆಯಾಗಲಿದೆ ಎಂದು ರಹಾನೆ ಹೇಳಿದ್ದಾರೆ. ಕರ್ನಾಟಕದಿಂದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ (ಮೊದಲ ಪ್ರವಾಸ), ಸ್ಟುವರ್ಟ್ ಬಿನ್ನಿ ತಂಡದಲ್ಲಿದ್ದಾರೆ.