ಹೈದರಾಬಾದ್, ಜ. 08: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವಂತೆ ನಡೆದುಕೊಂಡಿರುವ ಕಾರಣಕ್ಕಾಗಿ ಎಂಎಸ್ ಧೋನಿ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಅನಂತಪುರ ನ್ಯಾಯಾಲಯವೊಂದು ಶುಕ್ರವಾರ ವಾರೆಂಟ್ ಜಾರಿಗೊಳಿಸಿದೆ. ಫೆಬ್ರವರಿ 25ಕ್ಕೆ ಖುದ್ದು ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗುವಂತೆ ಸೂಚಿಸಲಾಗಿದೆ.
ಸದ್ಯ ಆಸ್ಟ್ರೇಲಿಯಾದಲ್ಲಿರುವ ಧೋನಿ ಅವರು ಭಾರತದ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದು ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳನ್ನಾಡಬೇಕಿದೆ. ಜನವರಿ 12ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಜನವರಿ 31ಕ್ಕೆ ಪ್ರವಾಸ ಮುಕ್ತಾಯವಾಗಲಿದೆ.
ಮ್ಯಾಗಜೀನ್ ವೊಂದರಲ್ಲಿ ಎಂಎಸ್ ಧೋನಿ ಅವರ ಚಿತ್ರಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕಪಡಿಸಿ ದೂರು ಸಲ್ಲಿಸಲಾಗಿತ್ತು. 2013ರ ಏಪ್ರಿಲ್ ಸಂಚಿಕೆಯ ಬಿಸಿನೆಸ್ ಟುಡೆ ಮ್ಯಾಗಜೀನ್ ನಲ್ಲಿ ಧೋನಿಯನ್ನು ಮಹಾವಿಷ್ಣುವಿನಂತೆ ಚಿತ್ರಿಸಿ 'God of Big Deals' ಎಂದು ಶೀರ್ಷಿಕೆ ನೀಡಲಾಗಿತ್ತು.
ಹತ್ತು ಹಲವು ಕಂಪನಿಗಳ ಉತ್ಪನ್ನಗಳನ್ನು ಕೈಯಲ್ಲಿ ಹಿಡಿದಿರುವ ವಿಷ್ಣುರೂಪಿ ಧೋನಿಯವರ ಒಂದು ಕೈಯಲ್ಲಿ ಶೂ ಕೂಡಾ ಇತ್ತು. ವಿಷ್ಣುವಿನ ರೂಪದಲ್ಲಿರುವ ಧೋನಿ ಕೈಯಲ್ಲಿ ತಾನು ರಾಯಭಾರಿಯಾಗಿರುವ ಲೇಸ್ ಪ್ಯಾಕೆಟ್, ಪೆಪ್ಸಿ ಬಾಟೆಲ್, ಏರ್ಸೆಲ್ ಸಿಮ್, ಮೊಬೈಲ್, ಬೂಸ್ಟ್, ಇಂಜಿನ್ ಆಯಿಲ್ ಕ್ಯಾನ್ ಹಾಗೂ ರಿಬಾಕ್ ಷೂ ಹಿಡಿದಿರುವಂತೆ ವಿನ್ಯಾಸಗೊಳಿಸಿದ ಚಿತ್ರ ಏಪ್ರಿಲ್ 2ರಂದು ಪ್ರಕಟಗೊಂಡಿತ್ತು.
ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ವಿಶ್ವ ಹಿಂದೂ ಪರಿಷತ್(ವಿಎಚ್ ಪಿ) ಮುಖಂಡರಾದ ವೈ. ಶ್ಯಾಮ್ ಸುಂದರ್ ಅವರು ಎಂಎಸ್ ಧೋನಿ ವಿರುದ್ಧ ಪಿಟೀಷನ್ ಸಲ್ಲಿಸಿದ್ದರು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಧೋನಿ ಕಾಣಿಸಿಕೊಂಡಿರುವುದಕ್ಕೆ ದೂರು ಸಲ್ಲಿಸಲಾಗಿದೆ ಎಂದು ಶ್ಯಾಮ್ ಸುಂದರ್ ಹೇಳಿದ್ದಾರೆ.
ಧೋನಿ ವಿರುದ್ಧ ಇದೇ ರೀತಿಯ ದೂರುಗಳು ದೆಹಲಿ, ಪುಣೆ ಹಾಗೂ ಇನ್ನಿತರ ನಗರಗಳಲ್ಲಿ ಹಾಕಲಾಗಿತ್ತು. ಇಂಗ್ಲೆಂಡ್ ಪ್ರವಾಸಕ್ಕೆ ಧೋನಿ ತೆರಳಿದ್ದಾಗ 2014ರ ಜೂನ್ ತಿಂಗಳಿನಲ್ಲಿ ಇದೇ ರೀತಿ ವಾರೆಂಟ್ ಜಾರಿಗೊಳಿಸಲಾಗಿತ್ತು.