ಮುಂಬೈ, ನ.09: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚೇರ್ಮನ್ ಹುದ್ದೆಯಿಂದ ಎನ್ ಶ್ರೀನಿವಾಸನ್ ಅವರನ್ನು ಕೆಳಗಿಳಿಸಲಾಗಿದೆ. ಈ ಬಗ್ಗೆ ಸೋಮವಾರ ನಡೆದ ವಾರ್ಷಿಕ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಐಸಿಸಿ ಚೇರ್ಮನ್ ಆಗಿ ಅಧಿಕಾರವಹಿಸಿಕೊಳ್ಳಲಿದ್ದು, ಜೂನ್ 2016ರ ತನಕ ಅವರ ಅಧಿಕಾರ ಅವಧಿ ಮುಂದುವರೆಯಲಿದೆ. ಜೂನ್ 2014ರಲ್ಲಿ ಐಸಿಸಿ ಚೇರ್ಮನ್ ಆಗಿ ಆಯ್ಕೆಯಾಗಿದ್ದ ಎನ್ ಶ್ರೀನಿವಾಸನ್ ಅವರು ಎರಡು ವರ್ಷದ ಅಧಿಕಾರ ಅವಧಿ ಪೂರೈಸುವುದಕ್ಕೂ ಮುನ್ನವೇ ಅಧಿಕಾರದಿಂದ ಕೆಳಗಿಳಿದಿದ್ದಾರೆ. [ ಐಸಿಸಿ ಚೇರ್ಮನ್ ಆಗಿ ಎನ್ ಶ್ರೀನಿವಾಸನ್ ಆಯ್ಕೆ]
ಉದ್ಯಮಿ ಎನ್ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರಾಗಿದ್ದ ಕಾಲದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ನಡೆದ ಭ್ರಷ್ಟಾಚಾರ, ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಅವರು ಬಿಸಿಸಿಐ ಹುದ್ದೆಯನ್ನು ತೊರೆದಿದ್ದರು. ಸದ್ಯಕ್ಕೆ ಶ್ರೀನಿವಾಸನ್ ಅವರು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.