ರಾಂಚಿ, ಫೆಬ್ರವರಿ 22: 13 ವರ್ಷಗಳ ಬಳಿಕ ಹಳೆ ನಂಟನ್ನು ಹುಡುಕಿಕೊಂಡು ಹೊರಟ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ರೈಲಿನಲ್ಲಿ ಪ್ರಯಾಣಿಸಿದ್ದು ಈಗ ಎಲ್ಲರ ಹುಬ್ಬೇರಿಸಿದೆ.
ಧೋನಿ ಬಯಸಿದ್ದರೆ ಯಾವ ವಿಮಾನ ಬೇಕಾದರೂ ಏರಬಹುದಾಗಿತ್ತು. ಸ್ವಂತಕ್ಕೆ ಬಾಡಿಗೆ ಹೆಲಿಕಾಪ್ಟರ್ ಪಡೆದು ಪ್ರಯಾಣಿಸಬಹುದಾಗಿತ್ತು. ಹಮ್ಮರ್ ವಾಹನವಿತ್ತು, ಬಹುಬೆಲೆಯ ಬೈಕ್ ಏರಿ ಹೋಗಬಹುದಾಗಿತ್ತು. ಆದರೆ, ತಂಡದೊಡನೆ ಸರಳ ರೀತಿಯಲ್ಲಿ ಪ್ರಯಾಣಿಸಿದ್ದಾರೆ. ವಿಶ್ವದ ಅತ್ಯಂತ ಶ್ರೀಮಂತ ಆಟಗಾರರ ಪೈಕಿ ಒಬ್ಬರೆನಿಸಿದರೂ, ಜಾರ್ಖಂಡ್ ತಂಡದ ಸಾಮಾನ್ಯ ಸದಸ್ಯನಾಗಿ ಕಾಣಿಸಿಕೊಂಡಿದ್ದಾರೆ.
ಜಾರ್ಖಂಡ್ ತಂಡದ ಇತರೆ ಸದಸ್ಯರ ಜತೆಗೆ ಸಹ ಪ್ರಯಾಣಿಕನಾಗಿ ಕೊಲ್ಕತಾದ ಹೌರಾಗೆ ಧೋನಿ ಪ್ರಯಾಣಿಸಿದ್ದಾರೆ. ಹೌರಾದಲ್ಲಿ ಈ ಹಿಂದೆ ಧೋನಿ ಟಿಕೆಟ್ ಕಲೆಕ್ಟರ್ ಆಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಫೆಬ್ರವರಿ 23ರಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಧೋನಿ ಅವರು ಈಗ ಟೆಸ್ಟ್ ತಂಡದ ಭಾಗವಾಗಿಲ್ಲ.
ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯ ಮೊದಲ ಪಂದ್ಯ ಈಡನ್ ಗಾರ್ಡನ್ಸ್ ನಲ್ಲಿ ಫೆಬ್ರವರಿ 25ರಂದು ನಡೆಯಲಿದ್ದು, ಕರ್ನಾಟಕ ವಿರುದ್ಧ ಜಾರ್ಖಂಡ್ ಆಡಲಿದೆ. ನಂತರ ಇದೇ ಮೈದಾನದಲ್ಲಿ ಚತ್ತೀಸ್ ಗಢ ವಿರುದ್ಧ ಫೆ.26ರಂದು ಆಡಲಿದೆ. ಹೌರಾ ರೈಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದ ಧೋನಿ ಅವರು ಈಗ ಹಳೆ ನೆನಪುಗಳನ್ನು ಹೊತ್ತು ಕೊಲ್ಕತ್ತಾಗೆ ಕಾಲಿರಿಸುತ್ತಿದ್ದಾರೆ.