ಮುಂಬೈ, ಜೂ.18: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶರದ್ ಬಣ ಮಂಡಳಿಯ ಆರು ಪ್ರಮುಖ ಹುದ್ದೆಗಳಲ್ಲಿ 5 ಗೆದ್ದುಕೊಂಡಿದೆ. ಮಾಜಿ ಕ್ರಿಕೆಟರ್ ದಿಲೀಪ್ ವೆಂಗ್ ಸರ್ಕಾರ್ ಅವರಿಗೆ ಉಪಾಧ್ಯಕ್ಷ ಹುದ್ದೆ ಒಲಿದಿದೆ.
ಎಂಸಿಎ ಅಧ್ಯಕ್ಷ ಸ್ಥಾನಕ್ಕೆ ನಡೆದ ಬುಧವಾರ ನಡೆದ ಚುನಾವಣೆಯಲ್ಲಿ ಶರದ್ ಪವಾರ್ ಅವರು ಸಮೀಪದ ಪ್ರತಿಸ್ಪರ್ಧಿ ವಿಜಯ್ ಪಾಟೀಲ್ ಅವರನ್ನು 27 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎರಡು ವರ್ಷಕ್ಕೊಮ್ಮೆ ಎಂಸಿಎ ಅಧ್ಯಕ್ಷೀಯ ಚುನಾವಣೆ ನಡೆಸಲಾಗುತ್ತದೆ.
ಪವಾರ್ ಅವರಿಗೆ 174 ಮತಗಳು ಬಂದರೆ, ವಿಜಯ್ ಅವರಿಗೆ 145 ಮತಗಳು ಬಿದ್ದಿವೆ. ಐಸಿಸಿ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಪುನಾರಾಯ್ಕೆಯಾಗಿದ್ದಾರೆ. ವಿಜಯ್ ಪಾಟೀಲ್ ಅವರಿಗೆ ಶಿವಸೇನೆ ಬೆಂಬಲ ಸಿಕ್ಕಿದ್ದರಿಂದ ಇದು ಎನ್ ಸಿಪಿ vs ಶಿವಸೇನೆ ಸಮರ ಎನಿಸಿತ್ತು. ಆದರೆ, ಅಂತಿಮವಾಗಿ ಪವಾರ್ ತಮ್ಮ 'ಪವರ್' ತೋರಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಅವರು ಆಶೀಶ್ ಶೆಲಾರ್ ಜೊತೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಜಯ್ ಪಾಟೀಲ್ ಬಣದ ಮಾಜಿ ಟೆಸ್ಟ್ ಕ್ರಿಕೆಟರ್ಸ್ ಲಾಲ್ ಚಂದ್ ರಜಪೂತ್ ಹಾಗೂ ಅಬೇ ಕುರುವಿಲ್ಲ ಅವರು ಸೋಲು ಕಂಡಿದ್ದಾರೆ.
ಶರದ್ ಪವಾರ್ ಅವರು 2001-2010 ಹಾಗೂ 2012ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಲಿತ್ ಮೋದಿ ಅವರು ಐಪಿಎಲ್ ಟೂರ್ನಿ ಆಯೋಜನೆಗೂ ಶರದ್ ಪವಾರ್ ಕಾರಣರಾಗಿದ್ದರು. ಒಂದರ್ಥದಲ್ಲಿ ಲಲಿತ್ ಗೆ ಶರದ್ ಪವಾರ್ ಅವರು ಗುರುವಾಗಬೇಕು. ಪವಾರ್ ಅವರ ಅಧಿಕಾರ ಅವಧಿಯಲ್ಲಿ ಸುಮಾರು 60ಕ್ಕೂ ಅಧಿಕ ಟೆಸ್ಟ್ ಕ್ರಿಕೆಟರ್ಸ್ ಗಳು ಭಾರತ ತಂಡಕ್ಕೆ ಸಿಕ್ಕಿದ್ದರು. (ಒನ್ ಇಂಡಿಯಾ ಸುದ್ದಿ)