ಧರ್ಮಶಾಲಾ, ಮಾರ್ಚ್ 28: ''ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ತಾವು ಬ್ಯಾಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾಗ, ವಿಕೆಟ್ ಕೀಪಿಂಗ್ ನಲ್ಲಿ ನಿಂತಿದ್ದ ಮ್ಯಾಥ್ಯೂ ವೇಡ್ ನನ್ನನ್ನು ಕಿಚಾಯಿಸಿದ್ದೇ ನನ್ನಲ್ಲಿ ಕಿಚ್ಚು ಹೊತ್ತಿಸಿ, ನಾನು ಉತ್ತಮವಾಗಿ ಆಡಲು ಕಾರಣವಾಗಿತು'' ಎಂದು ರವೀಂದ್ರ ಜಡೇಜಾ ಅವರು ತಿಳಿಸಿದ್ದಾರೆ.
ಧರ್ಮಶಾಲಾ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್ ವೇಳೆ 63 ರನ್ ಗಳಿಸಿದ ಅವರು, ಈ ಪಂದ್ಯದಲ್ಲಿ 4 ವಿಕೆಟ್ ಉರುಳಿಸಿದ್ದಾರೆ. ಇದಲ್ಲದೆ, ಸದ್ಯಕ್ಕಷ್ಟೇ ಮುಕ್ತಾಯವಾದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 24 ವಿಕೆಟ್ ಉರುಳಿಸುವ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ತಮ್ಮ ಈ ಯಶಸ್ಸಿನ ಹಿಂದಿನ ಕಾರಣವನ್ನು ಹಂಚಿಕೊಂಡಿರುವ ಅವರು, ''ಧರ್ಮಶಾಲಾ ಪಂದ್ಯದಲ್ಲಿ ನಾನು ನನ್ನ ಪಾಡಿಗೆ ಬ್ಯಾಟಿಂಗ್ ಆಡುತ್ತಿದ್ದೆ. ಆದರೆ, ವಿಕೆಟ್ ಕೀಪಿಂಗ್ ಗೆ ನಿಂತಿದ್ದ ಮ್ಯಾಥ್ಯೂ ವೇಡ್ ಅವರು, ನನ್ನನ್ನು ಕಿಚಾಯಿಸಿದರು. ಇದು ನನ್ನನ್ನು ಘಾಸಿಗೊಳಿಸದರೂ ಬ್ಯಾಟ್ ಮೂಲಕವೇ ಇವರಿಗೆ ಉತ್ತರ ಕೊಡಬೇಕೆಂದು ತೀರ್ಮಾನಿಸಿದೆ. ನನ್ನ ಮನಸ್ಸು ರೊಚ್ಚಿಗೆದ್ದಿತು. ಹಾಗಾಗಿ, ನಾನು ಬ್ಯಾಟಿಂಗ್ ನಲ್ಲಿ ಅರ್ಧಶತಕ ಸಿಡಿಸಲು ಸಾಧ್ಯವಾಯಿತು'' ಎಂದು ತಿಳಿಸಿದರು.