ವಿಶಾಖಪಟ್ಟಣ, ಮಾರ್ಚ್. 27 : ಕರ್ನಾಟಕದ ಮನೀಷ್ ಪಾಂಡೆ (104) ಅವರ ಸೊಗಸಾದ ಶತಕದ ನೆರವಿನಿಂದ ಇಂಡಿಯಾ ರೆಡ್ ತಂಡ ದೇವಧರ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದೆ.
ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾರ್ಥಿವ್ ಪಟೇಲ್ ನೇತೃತ್ವದ ಇಂಡಿಯಾ ರೆಡ್ ತಂಡ 32ರನ್ ಗಳಿಂದ ವಿಜಯ್ ಹಜಾರೆ ಟ್ರೋಫಿಯ ಚಾಂಪಿಯನ್ ತಮಿಳುನಾಡು ತಂಡವನ್ನು ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಇಂಡಿಯಾ ರೆಡ್ 50 ಓವರ್ಗಳಲ್ಲಿ 8 ವಿಕೆಟ್ಗೆ 316ರನ್ ಕಲೆಹಾಕಿತು. ಸವಾಲಿನ ಗುರಿ ಬೆನ್ನಟ್ಟಿದ ತಮಿಳುನಾಡು ತಂಡ 48.4 ಓವರ್ಗಳಲ್ಲಿ 284ರನ್ ಗಳಿಗೆ ಸರ್ವಪತನ ಕಂಡಿತು.[ದೇವಧರ್ ಟ್ರೋಫಿ: ಧವನ್ ಶತಕ, ಇಂಡಿಯಾ ರೆಡ್ ಶುಭಾರಂಭ]
ನಾಲ್ಕನೇ ಓವರ್ನಲ್ಲಿ ಎಂ. ಮಹಮ್ಮದ್ ಅವರು ನಾಯಕ ಪಾರ್ಥಿವ್(11) ವಿಕೆಟ್ ಪಡೆದು ರೆಡ್ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಬಳಿಕ ಮನೀಷ್ ಪಾಂಡೆ ಮತ್ತು ಶಿಖರ್ ಧವನ್ ಜೋಡಿ ಎರಡನೇ ವಿಕೆಟ್ಗೆ 86ರನ್ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿತು.
ಗೋವಿಂದ ಪೊದ್ದಾರ್ (7) ಮತ್ತು ಇಶಾಂಕ್ ಜಗ್ಗಿ (12) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಅಕ್ಷರ್ ಪಟೇಲ್ 43ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ನೆರವಿನಿಂದ 51 ಸಿಡಿಸಿ ತಂಡಕ್ಕೆ ಆಸರೆಯಾದರು.
ನಂತರ ಬ್ಯಾಟಿಂಗ್ ಗೆ ಬಂದ ಗುರುಕೀರತ್ ಸಿಂಗ್ (25) ಮತ್ತು ಅಕ್ಷಯ್ ಕಾರ್ನೆವಾರ್ (ಔಟಾಗದೆ 28) ಬಿರುಸಿನ ಆಟ ಆಡಿ ತಂಡದ ಮೊತ್ತ ಹೆಚ್ಚಿಸಿದರು.
ಗುರಿ ಬೆನ್ನಟ್ಟಿದ ತಮಿಳುನಾಡು ತಂಡ ಗಂಗ ಶ್ರೀಧರ್ ರಾಜು (10) ಅವರ ವಿಕೆಟ್ ಬೇಗನೆ ಕಳೆದುಕೊಂಡಿತ್ತು. ಆದರೆ, ಆರಂಭಿಕ ಆಟಗಾರ ಕೌಶಿಕ್ ಗಾಂಧಿ (124) ಮತ್ತು ನಾರಾಯಣ ಜಗದೀಶನ್ (64) ಎರಡನೇ ವಿಕೆಟ್ ಗೆ (114) ಶತಕದ ಜೊತೆಯಾಟ ತಂಡದ ಗೆಲುವಿನ ಆಸೆಗೆ ಚಿಗುರಿಸಿದರು.
ಆದರೆ, ರೆಡ್ ಇಂಡಿಯಾ ಮಾರಕ ಬೌಲಿಂಗ್ ಗೆ ತಮಿಳುನಾಡು 48.4 ಓವರ್ಗಳಲ್ಲಿ 284ರನ್ ಗಳಿಸಲಷ್ಟೇ ಶಕ್ತವಾಯಿತು.