ಕೊಲಂಬೋ, ಜೂನ್ 25: ಶ್ರೀಲಂಕಾ ತಂಡದ ವೇಗದ ಬೌಲರ್ ಲಸಿತ್ ಮಾಲಿಂಗ ಅವರು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಶ್ರೀಲಂಕಾದ ಕ್ರೀಡಾ ಸಚಿವರ ಕುರಿತು ಮಾಲಿಂಗ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಶ್ರೀಲಂಕಾ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಕ್ರೀಡಾ ಸಚಿವ ದಯಾಸಿರಿ ಜಯಸೇಕರ ಆಕ್ಷೇಪ ಎತ್ತಿದ್ದರು. ಅದರಲ್ಲೂ ಮಾಲಿಂಗ ಬಗ್ಗೆ ಟೀಕಿಸಿದ್ದರು.
ಇದರಿಂದ ಆಕ್ರೋಶಗೊಂಡ ಲಸಿತ್ ಮಾಲಿಂಗ್ ಸಚಿವರಿಗೆ ಕ್ರಿಕೆಟ್ ಬಗ್ಗೆ ಏನು ಗೊತ್ತಿದೆ. ಕೋತಿ, ಗಿಳಿ ಗೂಡಿನ ಟೊಳ್ಳಿನ ಬಗ್ಗೆ ಮಾತನಾಡಿದಂತಾಗಿದೆ ಅಂತಾ ತಿರುಗೇಟು ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಯಶೇಕರ ಅವರು, ನಾನು ಲಸಿತ್ ಮಾಲಿಂಗ ವಿರುದ್ಧ ಟೀಕೆ ಮಾಡಿಲ್ಲ. ಇಡೀ ತಂಡದ ಫಿಟ್ನೆಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಆದರೆ, ಇದಕ್ಕೆ ಪ್ರತಿಯಾಗಿ ಮಾಲಿಂಗ ಅವರು ನನ್ನ ವಿರುದ್ಧ ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕಿಸ್ತಾನ ತಂಡದ ವಿರುದ್ಧ ಏಂಜೆಲೋ ಮ್ಯಾಥ್ಯೂಸ್ ಅವರ ಶ್ರೀಲಂಕಾ ತಂಡ ಸೋಲು ಅನುಭವಿಸಿತ್ತು. ಪಾಕಿಸ್ತಾನ ತಂಡವು ಫೈನಲ್ ನಲ್ಲಿ ಭಾರತವನ್ನು ಸೋಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.