ಕೊಲಂಬೋ, ಮಾ. 07: ಏಷ್ಯಾಕಪ್ ನಲ್ಲಿ ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಲಂಕಾಕ್ಕೆ ಜಯ ತಂದುಕೊಟ್ಟ ಮಾಲಿಂಗ ಅವರು ವಿಶ್ವ ಟಿ20 ನಂತರ ನಿವೃತ್ತಿಯಾಗುವುದಾಗಿ ಘೋಷಿಸಿದ್ದು ನಿಮಗೆಲ್ಲ ತಿಳಿದಿರಬಹುದು. ಈಗ ಮಾಲಿಂಗ ಅವರು ಶ್ರೀಲಂಕಾ ತಂಡದ ನಾಯಕತ್ವದಿಂದ ಕೆಳಗಿಳಿದಿರುವ ಸುದ್ದಿ ಸೋಮವಾರ (ಮಾರ್ಚ್ 07) ಅಭಿಮಾನಿಗಳಿಗೆ ನಿರಾಶೆ ತಂದಿದೆ.
ಮೊಟ್ಟ ಮೊದಲ ಬಾರಿಗೆ ವಿಶ್ವ ಟ್ವೆಂಟಿ20 ಕಪ್ ಗೆಲ್ಲಲು ಕಾರಣರಾಗಿದ್ದ ಲಸಿತ್ ಮಾಲಿಂಗ ಅವರು ಶ್ರೀಲಂಕಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಮಾಲಿಂಗ ಅವರು ತಂಡದಲ್ಲಿ ಆಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
ಆಲ್ ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಅವರು ಲಸಿತ್ ಮಾಲಿಂಗ ಅವರ ಬದಲಿಗೆ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೀಲಂಕಾದ ಏಕದಿನ ಕ್ರಿಕೆಟ್, ಟೆಸ್ಟ್ ಹಾಗೂ ಟ್ವೆಂಟಿ20 ತಂಡ ಮೂರಕ್ಕೂ ಏಂಜೆಲೋ ಮ್ಯಾಥ್ಯೂಸ್ ನಾಯಕರಾಗಿ ಮುಂದುವರೆಯಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೋಹನ್ ಡಿ ಸಿಲ್ವ ಅವರು ಹೇಳಿದ್ದಾರೆ.
ಲಸಿತ್ ಮಾಲಿಂಗ ಅವರ ಗಾಯದ ಸಮಸ್ಯೆ, ಫಿಟ್ನೆಸ್ ನೋಡಿಕೊಂಡು ಅವರನ್ನು ಆಯ್ಕೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು. ಮೊಟ್ಟ ಮೊದಲ ಬಾರಿಗೆ ಟ್ವೆಂಟಿ20 ಮಾದರಿಯಲ್ಲಿ ನಡೆದ ಏಷ್ಯಾಕಪ್ 2016 ಟೂರ್ನಿಯಲ್ಲಿ ಶ್ರೀಲಂಕಾ ತಂಡ ಕಳಪೆ ಪ್ರದರ್ಶನ ನೀಡಿತು. ಟಿ20 ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿತು. (ಪಿಟಿಐ)