ಬೆಂಗಳೂರು, ಫೆಬ್ರವರಿ 24: ಭಾರತೀಯ ಸೇನೆಯ ಸುಮಾರು 5 ಸಾವಿರ ಯೋಧರಿಗೆ ಮುಂದಿನ ತಿಂಗಳ 4ರಿಂದ 8ರವರೆಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯವನ್ನು ಉಚಿತವಾಗಿ ನೋಡುವ ಅವಕಾಶವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ನೀಡಿದೆ.
ಐದು ದಿನಗಳ ಕಾಲ ನಡೆಯಲಿರುವ ಈ ಪಂದ್ಯದ ಕೊನೆಯ ಮೂರು ದಿನಗಳಿಗೆ ಈ ಪ್ರವೇಶ ನೀಡಲಾಗಿದೆ ಎಂದು ಕೆಎಸ್ ಸಿಎ ವಕ್ತಾರರಾದ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ ಭಾರತೀಯ ಸೇನೆಯ ಕಚೇರಿ ಹಾಗೂ ಕೇರಳ ಉಪ ವಿಭಾಗಗಳ ಕೇಂದ್ರ ಕಚೇರಿಯ ಅಧೀನದಲ್ಲಿ ಸೇವೆ ಸಲ್ಲಿಸುವ ಯೋಧರಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ 'ಪಯೋನಿಯರ್ ಕಾರ್ಪ್ಸ್ ಟ್ರೈನಿಂಗ್ ಸೆಂಟರ್ ಮಿಲಿಟರಿ ಬ್ಯಾಂಡ್'ನ ಕಲಾವಿದರು ಪಂದ್ಯದ ಟೀ ಹಾಗೂ ಲಂಚ್ ಬ್ರೇಕ್ ಗಳ ವೇಳೆ ತಮ್ಮ ವಾದ್ಯಗೋಷ್ಠಿಯ ಮೂಲಕ ಮನರಂಜನೆ ನೀಡಲಿದ್ದಾರೆ.
ಅಂದಹಾಗೆ, ಟೆಸ್ಟ್ ಪಂದ್ಯದ ಟಿಕೆಟ್ ಗಳಿಗಾಗಿ ಫೆ. 25, 26ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಮಾರಾಟಕ್ಕೆ ಏರ್ಪಾಟು ಮಾಡಲಾಗಿದೆ ಎಂದು ವಿನಯ್ ಮೃತ್ಯಂಜಯ ತಿಳಿಸಿದರು.