ಮೈಸೂರು, ಸೆ. 15: ಎಡಗೈ ಬ್ಯಾಟ್ಸ್ ಮನ್ ಜೆ ಸುಚಿತ್ ಅವರು ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಅತ್ಯಂತ ತ್ವರಿತ ಗತಿಯಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ, ಮೈಸೂರು ವಾರಿಯರ್ಸ್ ತಂಡಕ್ಕೆ ಈ ತ್ವರಿತಗತಿ ಅರ್ಧಶತಕ ಪ್ರಯೋಜನಕ್ಕೆ ಬರಲಿಲ್ಲ. ಬಿಜಾಪುರ್ ಬುಲ್ಸ್ ತಂಡ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿತು.
ಮೈಸೂರಿನ ಬ್ಯಾಟ್ಸ್ ಮನ್ ಜೆ ಸುಚಿತ್ ಅವರು 15 ಎಸೆತಗಳಲ್ಲಿ 54ರನ್ ಚೆಚ್ಚಿದರು. ಸುಚಿತ್ ಆಟದಲ್ಲಿ 3 ಬೌಂಡರಿ, 6 ಭರ್ಜರಿ ಸಿಕ್ಸರ್ ಗಳಿತ್ತು. ಇಂಡಿಯನ್ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಾ ಯೂಸುಫ್ ಪಠಾಣ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 15 ಎಸೆತಗಳಲ್ಲಿ 50 ರನ್ ಚೆಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 167ರನ್ ಗಳಿಸಿತ್ತು. ವಾರಿಯರ್ಸ್ ಪರ ಸಿಎಂ ಗೌತಮ್ 58ರನ್ ಹಾಗೂ ಸುಚಿತ್ ಅಜೇಯ 54ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು.