ಹುಬ್ಬಳ್ಳಿ, ಸೆ. 18: ಕರ್ನಾಟಕ ಪ್ರೀಮಿಯರ್ ಲೀಗ್ (ಕೆ ಪಿಎಲ್ ) 5ನೇ ಆವೃತ್ತಿಯ ಎರಡನೇ ದಿನದ ಪಂದ್ಯದಲ್ಲಿ ಕಿಚ್ಚ ಸುದೀಪ ನಾಯಕತ್ವದ ಸಿನಿಮಾ ನಟರನ್ನುಳ್ಳ ರಾಕ್ ಸ್ಟಾರ್ಸ್ ತಂಡದ ವಿರುದ್ಧ ಮೈಸೂರು ವಾರಿಯರ್ಸ್ ತಂಡ ಭರ್ಜರಿ ಆಟ ಪ್ರದರ್ಶಿಸಿದೆ. ರಾಕ್ ಸ್ಟಾರ್ಸ್ ತಂಡಕ್ಕೆ ಮೈಸೂರು ತಂಡ 220 ರನ್ ಗಳ ಟಾರ್ಗೆಟ್ ನೀಡಿತ್ತು. ಬೃಹತ್ ಮೊತ್ತವನ್ನು ಚೇಸ್ ಮಾಡಲಾಗದೆ ರಾಕ್ ಸ್ಟಾರ್ಸ್ ಸೋಲು ಕಂಡಿದ್ದಾರೆ.
ರನ್ ಚೇಸ್ : 23 ಎಸೆತಗಳಲ್ಲಿ 51ರನ್ ಗಳಿಸಿ ವಿಹಾನ್ ರಾಜೀವ್ ಔಟ್ ಆದ ಬಳಿಕ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ 101 ಸ್ಕೋರಿಗೆ ಆಲೌಟ್ ಆಗಿ ಸುಲಭವಾಗಿ ಮೈಸೂರಿಗೆ ರಾಕ್ ಸ್ಟಾರ್ಸ್ ಶರಣಾದರು. ಮೈಸೂರು ಪರ 89ರನ್ ಗಳಿಸಿದ ಅರ್ಜುನ್ ಹೊಯ್ಸಳ ಅವರು ಪಂದ್ಯ ಶ್ರೇಷ್ಠ ಎನಿಸಿದರು.
ಆರಂಭಿಕ ಆಟಗಾರರಾದ ರಾಜು ಭಟ್ಕಳ ಹಾಗೂ ಅರ್ಜುನ್ ಹೊಯ್ಸಳ ಅವರ ಉತ್ತಮ ಆರಂಭದ ಅಡಿಪಾಯದ ಮೇಲೆ ಮೈಸೂರು ಬೃಹತ್ ಮೊತ್ತ(219/4, 20 ಓವರ್ಸ್) ಕಲೆ ಹಾಕಿದೆ. ಅರ್ಜುನ್ ಹೊಯ್ಸಳ 62 ಎಸೆತಗಳಲ್ಲಿ 89 ರನ್ ಗಳಿಸಿ ಔಟಾಗದೆ ಉಳಿದರು.[ಕೆಪಿಎಲ್ ಪಂದ್ಯಗಳ ವೇಳಾಪಟ್ಟಿ ಬದಲು]
ಪಂದ್ಯದ 13ನೇ ಓವರ್ ತನಕ ರಾಜು ಭಟ್ಕಳ ಹಾಗೂ ಅರ್ಜುನ್ ಅವರು ಮುರಿಯದ ಜೊತೆಯಾಟ ಪ್ರದರ್ಶಿಸಿದರು. ರಾಜು 46ರನ್ ಗಳಿಸಿ ಔಟಾದರು. ನಂತರ ಬಂದ ಕೆ ಗೌತಮ್ ಅವರು 13 ಎಸೆತಗಳಲ್ಲಿ 33ರನ್ ಗಳಿಸಿ ಎನ್ ಸಿ ಅಯ್ಯಪ್ಪ ಅವರಿಗೆ ವಿಕೆಟ್ ಒಪ್ಪಿಸಿದರು. ಗೌತಮ್ ಔಟಾದಾಗ ತಂಡದ ಮೊತ್ತ ಸ್ಕೋರ್ 179/2.[ಮೈಸೂರು ತಂಡಕ್ಕೆ 'ಆಸೀಸ್ ಸ್ಟಾರ್' ಮಾರ್ಗದರ್ಶಿ]
ಸುದೀಪ್ ಗೆ ಪೆಟ್ಟು: ಇನ್ನೊಂದೆಡೆ ಅರ್ಜುನ್ ಹೊಯ್ಸಳ ಅವರು ಸಿಕ್ಸ್ ಮೇಲೆ ಸಿಕ್ಸ್ ಸಿಡಿಸುತ್ತಾ ತಂಡದ ಮೊತ್ತ ಏರಿಸಿದರು. ರಾಕ್ ಸ್ಟಾರ್ಸ್ ತಂಡದ ವೇಗಿ ಅಕ್ಷಯ್ ಅವರ ಎಸೆತವನ್ನು ಹಿಡಿಯಲು ಯತ್ನಿಸಿದ ವಿಫಲರಾದ ಸುದೀಪ್ ಅವರ ಎದೆಗೆ ಚೆಂಡು ಬಡಿದು ಪೆಟ್ಟಾಯಿತು. ಆದರೆ, ತಕ್ಷಣವೇ ಅವರನ್ನು ಪೆವಿಲಿಯನ್ ಗೆ ಕರೆಸಿಕೊಂಡು ಚಿಕಿತ್ಸೆ ನೀಡಲಾಯಿತು. ಪಂದ್ಯದ ನಂತರ ಮಾತನಾಡಿದ ಸುದೀಪ್, ಯಾವುದೇ ಸಮಸ್ಯೆಯಿಲ್ಲ ಎಂದಿದ್ದಾರೆ.