ಬೆಂಗಳೂರು, ಜುಲೈ 04: ಕರ್ನಾಟಕದ ಪ್ರಿಮಿಯರ್ ಲೀಗ್ ಟೂರ್ನಿಯ ಮೂಲಕ ಅನೇಕ ಯುವ ಪ್ರತಿಭೆಗಳ ಕನಸು ಸಾಕಾರಗೊಳ್ಳಲಿದೆ. ಜೊತೆಗೆ ಈ ಬಾರಿ ಕಿಚ್ಚ ಸುದೀಪ್ ಅವರ ಸಾಧನೆಯೂ ಗಮನಾರ್ಹವಾಗಿದೆ.
ಶಿವಮೊಗ್ಗ ತಂಡ ಖರೀದಿ ಹಾಗೂ ಮಾಜಿ ಟೆಸ್ಟ್ ಆಟಗಾರರಿಗೆ ನಾಯಕನಾಗಿ ಕಣಕ್ಕಿಳಿಯುತ್ತಿರುವುದು ಕಿಚ್ಚ ಸುದೀಪ್ ಅವರ ಕನಸು ನನಸಾಗಿಸಿದೆ.
ಆಲ್ ಸ್ಟಾರ್ ಕ್ರಿಕೆಟ್ ತಂಡ ಬಗ್ಗೆ ವಿವರಣೆ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಟೆಸ್ಟ್ ಕ್ರಿಕೆಟರ್ ಗಳಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ ಹಾಗೂ ಡೇವಿಡ್ ಜಾನ್ಸನ್ ಅವರಿಗೆ ಕ್ಯಾಪ್ಟನ್ ಆಗಿ ಕಿಚ್ಚ ಸುದೀಪ್ ತಂಡವನ್ನು ಮುನ್ನಡೆಸಲಿದ್ದಾರೆ.
ಕೆಪಿಎಲ್ 4 ಆವೃತ್ತಿ 8 ತಂಡಗಳು ಭಾಗವಹಿಸುತ್ತಿದ್ದು ಹುಬ್ಬಳ್ಳಿ ಹಾಗೂ ಮೈಸೂರಿನಲ್ಲಿ ಪಂದ್ಯಾವಳಿಗಳು ಆಗಸ್ಟ್ 28 ರಿಂದ ಸೆಪ್ಟೆಂಬರ್ 13. ಶಿವಮೊಗ್ಗ ಫ್ರಾಂಚೈಸಿ ಈ ಬಾರಿ ಹೊಸ ತಂಡವಾಗಿ ಸೇರ್ಪಡೆಗೊಂಡಿದೆ.
ಸುದೀಪ್ ಬಗ್ಗೆ ವೆಂಕಿ: ಮೊದಲಿಗೆ ನನಗೆ ಕರೆ ಮಾಡಿ ತಂಡದ ಬಗ್ಗೆ ಹೇಳಿದಾಗ ನನಗೆ ಆಫರ್ ಕೊಡುತ್ತಾರೆ ಎಂಬ ಊಹೆ ಕೂಡಾ ಇರಲಿಲ್ಲ. ಸ್ಟಾರ್ ಗಳ ತಂಡದಲ್ಲಿ ಆಡುವಂತೆ ಕೇಳಿಕೊಂಡಾಗ ತಕ್ಷಣವೇ ಒಪ್ಪಿಕೊಂಡೆ. ಅಮೀರ್ ಸೊಹೈಲ್ ವಿರುದ್ಧ ತೋರಿಸಿದ ಪ್ರದರ್ಶನ ಮತ್ತೆ ನೀಡುತ್ತೇನೆ, ಅಥವಾ ಸೆಲೆಬ್ರಿಟಿಗಳ ತಂಡ ಮತ್ತೆ ಗೆಲುವಿನ ಹಾದಿ ಹಿಡಿಯುವಂತೆ ಮಾಡುತ್ತೇನೆ ಎಂದು ಹೇಳಲಾರೆ. ಅದರೆ, ರಾಕ್ ಸ್ಟಾರ್ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ, ಸುದೀಪ್ ಇಟ್ಟಿರುವ ಭರವಸೆ ಹುಸಿಗೊಳಿಸಲಾರೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.
ಭಾರತದ ಪರ 33 ಟೆಸ್ಟ್ ಹಾಗೂ 161 ಏಕದಿನ ಕ್ರಿಕೆಟ್ ಆಡಿರುವ ವೆಂಕಟೇಶ್ ಪ್ರಸಾದ್ ಅವರು ಸುನಿಲ್ ಜೋಶಿ ಹಾಗೂ ಡೇವಿಡ್ ಜಾನ್ಸನ್ ಸೇರ್ಪಡೆಯಿಂದ ತಂಡ ಬಲಗೊಂಡಿದೆ ಎಂದಿದ್ದಾರೆ.
ಸುದೀಪ್ ವಿಷನ್ ಇಷ್ಟವಾಯಿತು: ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ ನೀಡಲು ಸುದೀಪ್ ಇಷ್ಟಪಡುತ್ತಾರೆ. ಗ್ರಾಮೀಣ ಕರ್ನಾಟಕದ ಪ್ರತಿಭೆಗಳನ್ನು ಪರಿಚಯಿಸಲು ಕೆಪಿಎಲ್ ಸೂಕ್ತ ವೇದಿಕೆ ಎಂದಿದ್ದಾರೆ. ಕೆಪಿಎಲ್ ಪಂದ್ಯಾವಳಿಗಳು ಈ ಬಾರಿ ಸೋನಿ ಸಿಕ್ಸ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.