ಬೆಂಗಳೂರು, ಮಾರ್ಚ್ 25: ತನ್ನ ಅಧೀನದಲ್ಲಿರುವ ಉದಯೋನ್ಮುಖ ಕ್ರಿಕೆಟ್ ಆಟಗಾರರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್ ಸಿಎ) ವಿಮೆ ಸೌಲಭ್ಯ ನೀಡಿದ್ದು, ಈ ಹೆಜ್ಜೆಯಿಟ್ಟ ದೇಶದ ಪ್ರಪ್ರಥಮ ಕ್ರಿಕೆಟ್ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಿಮೆಗೆ ಕೆಎಸ್ ಸಿಎ ಸುರಕ್ಷಾ ಎಂದು ಹೆಸರಿಡಲಾಗಿದೆ.
ಶನಿವಾರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ ಸಿಎ ವಕ್ತಾರರಾದ ವಿನಯ್ ಮೃತ್ಯುಂಜಯ ಅವರು ಈ ವಿಚಾರ ತಿಳಿಸಿದರು.
ಕಿರಿಯ ಕ್ರಿಕೆಟರ್ ಗಳಿಗೆ ಇದರಿಂದ ಹೆಚ್ಚು ಪ್ರಯೋಜನಗಳು ಸಿಗಲಿದ್ದು, ವೈಯಕ್ತಿಕ ಅಪಘಾತಗಳ ಸಂದರ್ಭಗಳಲ್ಲಿ ಅಥವಾ ಕ್ರಿಕೆಟ್ ಗೆ ಸಂಬಂಧಿಸಿದ ಇನ್ಯಾವುದೇ ಚಿಕಿತ್ಸೆ ಸಂದರ್ಭಗಳಿಗೆ ಈ ವಿಮಾ ಯೋಜನೆ ನೆರವಾಗಲಿದೆ ಎಂದು ಕೆಎಸ್ ಸಿಎ ತಿಳಿಸಿದೆ.
ಎರಡು ವರ್ಷಗಳ ಹಿಂದೆ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೌರ ವಿದ್ಯುತ್ ಫಲಕ ಅಳವಡಿಸುವ ಮೂಲಕ ದೇಶದ ಕ್ರಿಕೆಟ್ ಕ್ರೀಡಾಂಗಣವೊಂದಕ್ಕೆ ಇದೇ ಮೊದಲ ಬಾರಿಗೆ ಹಸಿರು ಇಂಧನ ಸೌಲಭ್ಯ ನೀಡಿದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೆಎಸ್ ಸಿಎ ಆಡಳಿತ ಮಂಡಳಿಯು ಆನಂತರ, ತ್ಯಾಜ್ಯ ನೀರು ಶುದ್ಧೀಕರಣ ಘಟಕ, ಮಳೆ ಕೊಯ್ಲು ಅಳವಡಿಕೆ, ಸಬ್ ಏರ್ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ಮತ್ತಷ್ಟು ಪ್ರಥಮಗಳ ದಾಖಲೆಯನ್ನು ತನ್ನ ಹೆಸರಿನಲ್ಲಿ ಹೊಂದಿತ್ತು.
ಇದೀಗ, ಕಿರಿಯ ಕ್ರಿಕೆಟಿಗರಿಗೆ ವಿಮೆ ಸೌಲಭ್ಯ ನೀಡುವ ಮೂಲಕ ಆಡಳಿತಾತ್ಮಕವಾಗಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡುವ ಮೂಲಕ ಆಡಳಿತಾತ್ಮಕ ವಿಚಾರದಲ್ಲಿ ಕೆಎಸ್ ಸಿಎ ಮತ್ತೊಂದು ಹಿರಿಮೆ ಸಂಪಾದಿಸಿದೆ ಎಂದು ವಿನಯ್ ಮೃತ್ಯುಂಜಯ ವಿವರಿಸಿದರು.