ಬೆಂಗಳೂರು, ಜು.02: ಚಾಂಪಿಯನ್ ಗಳ ಚಾಂಪಿಯನ್ ಕರ್ನಾಟಕ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸಿಎಂ ಗೌತಮ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಜುಲೈ 6ರಂದು ತಮ್ಮ ಲವರ್ ಮೇರಿಯನ್ನು ಕೈ ಹಿಡಿಯಲಿದ್ದಾರೆ. ಗೌತಮ್ -ಮೇರಿ ಪ್ರೀತಿ-ವಿರಹ-ಮದುವೆ ಹಿಂದೆಯೂ ಫ್ಲಾಶ್ ಬ್ಯಾಕ್ ಕಥೆ ಇದೆ.
ರಣಜಿ ಪಂದ್ಯವೊಂದರಲ್ಲಿ ಗೌತಮ್ ಒಳ್ಳೆ ಫಾರ್ಮ್ ನಲ್ಲಿದ್ದ ಕಾಲ. ಕಳೆದ ವರ್ಷ ಯಾವುದೋ ಒಂದು ಪಂದ್ಯದಲ್ಲಿ ಶತಕ ಬಾರಿಸಿದ ಗೌತ ಮ್ ಅವರು ತಮ್ಮ ಬ್ಯಾಟನ್ನು ಪೆವಿಲಿಯನ್ ನಲ್ಲಿ ಕುಳಿತ ತಮ್ಮ ಗೆಳತಿಯತ್ತ ತೋರಿಸಿ ಶತಕ ಸಂಭ್ರಮವನ್ನು ಆಚರಿಸಿದ್ದರು.
ಅಲ್ಲಿ ತನಕ ಮೇರಿ ಹಾಗೂ ಗೌತಮ್ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದಿರಲಿಲ್ಲ. ಅಷ್ಟಕ್ಕೂ ಮೇರಿ ಅವರ ಪೋಷಕರಿಗೆ ಇವರಿಬ್ಬರ ಪ್ರೇಮ ಸಂಬಂಧ ತಿಳಿದಿದ್ದು ಕೂಡಾ ಈ ಒಂದು ಫೋಟೋವನ್ನು ನೋಡಿದ ಮೇಲೆ ಎಂಬುದು ವಿಶೇಷ.
ನಂತರ ಎಲ್ಲಾ ಪೋಷಕರಂತೆ ಮೇರಿ ಪವಿತ್ರಾ ಅವರ ಅಪ್ಪ ಅಮ್ಮ ಕೂಡಾ ಕ್ರಿಕೆಟರ್ ಜೊತೆ ಮದುವೆಗೆ ಒಪ್ಪಿರಲಿಲ್ಲ. ಅದರೆ, ಈಗ ಮದುವೆಗೆ ವೇದಿಕೆ ಸಿದ್ಧವಾಗಿದೆ.ಜುಲೈ 5ರ ಸಂಜೆ ಎಚ್ಎಎಲ್ ಏರ್ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್ ರಾಯಲ್ ಆರ್ಕಿಡ್ನಲ್ಲಿ ಆರತಕ್ಷತೆ ನಡೆಯಲಿದೆ.
ಎಂಬಿಎ ಪದವೀಧರೆ ಪವಿತ್ರಾ ಸದ್ಯ ಗೂಗಲ್ ಸಂಸ್ಥೆಯ ಎಚ್ ಆರ್ ವಿಭಾಗದಲ್ಲಿ ಅಧಿಕಾರಿಯಾಗಿದ್ದಾರೆ. ಸಿಎಂ ಗೌತಮ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಬ್ಯಾಟ್ ಬೀಸುತ್ತಿದ್ದಾರೆ.
ಹೌದು, ನಮ್ಮ ಪ್ರೇಮಕ್ಕೆ ಮೊದಲು ಅಡ್ಡಿ ಆತಂಕಗಳಿತ್ತು. ಬೆಂಗಳೂರು ಮಿರರ್ ನಲ್ಲಿ ಬಂದ ಫೋಟೊ ಹಾಗೂ ವರದಿ ಮೂಲಕ ಮೇರಿ ಅವರ ಮನೆಗೆ ವಿಷಯ ತಿಳಿದಿದ್ದು ನಿಜ. ಇದರಿಂದ ಅವರ ಪೋಷಕರನ್ನು ಭೇಟಿ ಮಾಡಲು ನನಗೂ ಅನುಕೂಲವಾಯಿತು. ಒಂದು ರೀತಿಯಲ್ಲಿ ನಮ್ಮ ಪ್ರೇಮ ಸಂಬಂಧ ವಿವಾಹ ಬಂಧನಕ್ಕೆ ಮಿರರ್ ವರದಿ ಕಾರಣವಾಯಿತು ಎಂದು ಗೌತಮ್ ಹರ್ಷದಿಂದ ಹೇಳಿದ್ದಾರೆ. ಗೌತಮ್ ಹಾಗೂ ಮೇರಿಗೆ ಒನ್ ಇಂಡಿಯಾ ತಂಡದಿಂದಲೂ ಶುಭ ಹಾರೈಕೆಗಳು.