ಬೆಂಗಳೂರು, ನ.22: ಬೆಂಗಳೂರಿನ ಕ್ರೀಡಾ ಪತ್ರಕರ್ತ ಸಂಘ(ಎಸ್ ಡಬ್ಲೂಎಬಿ) ನೀಡುವ ವಾರ್ಷಿಕ ಕ್ರೀಡಾ ಪ್ರಶಸ್ತಿಯನ್ನು ಸತತ ಎರಡನೇ ಬಾರಿಗೆ ಕರ್ನಾಟಕ ರಣಜಿ ಕ್ರಿಕೆಟ್ ತಂಡ ಪಡೆದುಕೊಂಡಿದೆ.
ಆರ್ ವಿನಯ್ ಕುಮಾರ್ ನಾಯಕತ್ವದ ರಣಜಿ ತಂಡ 2014-15 ರ ಸಾಲಿನಲ್ಲಿ ವಿಜಯ್ ಹಜಾರೆ ಟ್ರೋಫಿ, ರಣಜಿ ಟ್ರೋಫಿ ಹಾಗೂ ಇರಾನಿ ಕಪ್ ಗೆದ್ದುಕೊಂಡಿದೆ. ಈ ಸಾಧನೆಯನ್ನು ಪರಿಗಣಿಸಿ ವಾರ್ಷಿಕ ಉತ್ತಮ ಕ್ರೀಡಾ ತಂಡ ಪ್ರಶಸ್ತಿಯನ್ನು ನೀಡಲಾಗಿದೆ.
'ಕಳೆದ ಎರಡು ವರ್ಷಗಳ ಕಾಲ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಸುವರ್ಣ ಕಾಲ ಎನ್ನಬಹುದು. ಆಟಗಾರರಿಗೆ ಸಹಾಯಕ ಸಿಬ್ಬಂದಿ ಹಾಗೂ ಕೋಚ್ ಗಳಿಂದ ಸಮರ್ಥ ಮಾರ್ಗದರ್ಶನ ಸಿಕ್ಕಿತು. ಜನರ ಬೆಂಬಲವನ್ನು ನಾವು ಸ್ಮರಿಸಬೇಕು ಎಂದು ನಾಯಕ ವಿನಯ್ ಕುಮಾರ್ ಹೇಳಿದ್ದಾರೆ.
ಕೆಎಸ್ ಸಿಎ, ಬ್ರಿಜೇಶ್ ಪಟೇಲ್, ಕೋಚ್ ಗಳಾದ ಜೆ ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್ ಅವರ ನೆರವಿನಿಂದ ತಂಡ ಈ ಪರಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ವಿನಯ್ ಹೇಳಿದರು.
ವಾರ್ಷಿಕ ಕ್ರೀಡಾಪಟು ಪುರುಷರ ವಿಭಾಗದಲ್ಲಿ ಉಳಿದಂತೆ ಗಾಲ್ಫರ್ ಅರಿಂಬಾನ್ ಲಹಿರಿ ಅವರು ಹಾಗೂ ಮಹಿಳೆಯರ ವಿಭಾಗದಲ್ಲಿ ಬಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲಹಿರಿ ಅವರು ಫೆಬ್ರವರಿ 2015ರಲ್ಲಿ ಮಲೇಷಿಯನ್ ಓಪನ್, ಇಂಡಿಯನ್ ಓಪನ್, ಮಕಾವ್ ಓಪನ್ ಗೆದ್ದುಕೊಂಡಿದ್ದಲ್ಲದೆ 2015ರ ಮಾಸ್ಟರ್ಸ್ ಟೂರ್ನಮೆಂಟ್ ನಲ್ಲಿ 49ನೇಸ್ಥಾನಕ್ಕೆ ತಲುಪಿದ ಸಾಧನೆ ಮಾಡಿದ್ದಾರೆ. ಏಷ್ಯನ್ ಟೂರ್ ನಲ್ಲಿ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಅಶ್ವಿನಿ ಪೊನ್ನಪ್ಪ ಅವರು 2014ರ ಕಾಮನ್ ವೆಲ್ತ್ ಗೇಮ್ಸ್ ಹಾಗೂ 2015ರ ಕೆನಡಾ ಓಪನ್ ನಲ್ಲಿ ಜ್ವಾಲಾ ಗುಟ್ಟಾ ಜೊತೆಗೂಡಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಕ್ರೀಡಾಪಟುಗಳ ವೃತ್ತಿ ಬದುಕಿನ ಬೆಳವಣಿಗೆಯಲ್ಲಿ ಕ್ರೀಡಾ ವರದಿಗಾರರ ಪಾತ್ರ ಹಿರಿದಾಗಿರುತ್ತದೆ. ಬೆಂಗಳೂರಿನಲ್ಲಿ ಎಲ್ಲಾ ಬಗೆಯ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದು ಎಸ್ ಡಬ್ಲ್ಯೂಎಬಿ ಅಧ್ಯಕ್ಷ ಆರ್ ಕೌಶಿಕ್ ಹೇಳಿದರು.
SWAB ಪ್ರಶಸ್ತಿ ವಿಜೇತರ ಪಟ್ಟಿ:
* ಜ್ಯೂನಿಯರ್ ವರ್ಷದ ಕ್ರೀಡಾಪಟು (ಪುರುಷ) : ಅರ್ಜುನ್ ಮೈನಿ (ಮೋಟರ್ ಸ್ಫೋರ್ಟ್ಸ್)
* ಜ್ಯೂನಿಯರ್ ವರ್ಷದ ಕ್ರೀಡಾಪಟು (ಮಹಿಳೆ) : ಅರ್ಚನಾ ಕಾಮತ್ (ಟೇಬಲ್ ಟೆನ್ನಿಸ್)
* ಪ್ರೋತ್ಸಾಹದಾಯಕ ಪ್ರಶಸ್ತಿ: ಬಿ ಸುರೇಶ್ (ಬಾಡ್ಮಿಂಟನ್)
* ಉತ್ತಮ ಸಂಘ, ಸಮಿತಿ: ಕರ್ನಾಟಕ ರಾಜ್ಯ ಈಜು ಸಂಸ್ಥೆ
* ವಾರ್ಷಿಕ ಉತ್ತಮ ಕ್ರೀಡಾಪಟು (ಪುರುಷ) : ಅರಿಂಬಾನ್ ಲಹಿರಿ (ಗಾಲ್ಫ್)
* ವಾರ್ಷಿಕ ಉತ್ತಮ ಕ್ರೀಡಾಪಟು (ಮಹಿಳೆ) : ಅಶ್ವಿನಿ ಪೊನ್ನಪ್ಪ (ಬಾಡ್ಮಿಂಟನ್)
* ವರ್ಷದ ಕೋಚ್ : ಜೆ ಅರುಣ್ ಕುಮಾರ್ ಹಾಗೂ ಮನ್ಸೂರ್ ಅಲಿ ಖಾನ್ (ಕ್ರಿಕೆಟ್)
* ಜೀವಮಾನದ ಸಾಧನೆ ಪ್ರಶಸ್ತಿ : ಈಶಯ್ಯ ಅರುಮೈ ನಾಯಗಂ (ಫುಟ್ಬಾಲ್)
* ವರ್ಷದ ಅತ್ಯುತ್ತಮ ತಂಡ: ಕರ್ನಾಟಕ ಕ್ರಿಕೆಟ್ ತಂಡ (ಹಿರಿಯ)
(ಒನ್ ಇಂಡಿಯಾ ಸುದ್ದಿ)