ಬೆಂಗಳೂರು, ಫೆಬ್ರವರಿ 21: ಸ್ಪಿನ್ ಬೌಲಿಂಗ್ ನ ತಂತ್ರಗಾರಿಯನ್ನು ಕಲಿಸಿಕೊಟ್ಟ ಗುರು ಹರ್ಭಜನ್ ಸಿಂಗ್ ಅವರುಳ್ಳ ಮುಂಬೈ ತಂಡವನ್ನು ಸೇರಿಕೊಂಡಿರುವುದು ತಮಗೆ ಹೆಚ್ಚು ಖುಷಿಕೊಟ್ಟಿದೆ ಎಂದು ಕರ್ನಾಟಕದ ಆಫ್ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ತಿಳಿಸಿದ್ದಾರೆ.
ಸೋಮವಾರ, ಬೆಂಗಳೂರಿನಲ್ಲಿ ನಡೆದ 2017ರ ಐಪಿಎಲ್ ಆಟಗಾರರ ಹರಾಜು ವೇಳೆ ಕೆ. ಗೌತಮ್ ಅವರಿಗೆ 2 ಕೋಟಿ ರು. ಮೊತ್ತ ನೀಡಿದ ಮುುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿತು. ಹರಾಜಿಗೂ ಮುನ್ನ ಗೌತಮ್ ಅವರಿಗೆ 20 ಲಕ್ಷ ರು. ಮೂಲಧನ ನಿಗದಿಪಡಿಸಲಾಗಿತ್ತು. ಆದರೆ, ಆ ಮೂಲ ಧನಕ್ಕಿಂತ ಸುಮಾರು 20 ಪಟ್ಟು ಹೆಚ್ಚು ಮೊತ್ತವನ್ನು ತೆರುವ ಮೂಲಕ ಮುಂಬೈ , ಗೌತಮ್ ಅವರನ್ನು ಖರೀದಿಸಿದ್ದು ಅವರಿಗೂ ಅಚ್ಚರಿ ತಂದಿದೆಯಂತೆ.[ಐಪಿಎಲ್ 2017 : ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ?]
ಈ ಬಗ್ಗೆ ಒನ್ ಇಂಡಿಯಾದೊಂದಿಗೆ ಸಂತಸ ಹಂಚಿಕೊಂಡಿರುವ ಗೌತಮ್, ''ನಾನು ಇಷ್ಟೊಂದು ದೊಡ್ಡ ಮೊತ್ತ ಪಡೆಯುತ್ತೇನೆಂದು ನಿರೀಕ್ಷಿಸಲಿಲ್ಲ. ಯಾವುದಾದರೊಂದು ಫ್ರಾಂಚೈಸಿಯು ನನ್ನನ್ನು ಆಯ್ಕೆ ಮಾಡಲಿ ಎಂದಷ್ಟೇ ಆಶಿಸಿದ್ದೆ'' ಎಂದು ತಿಳಿಸಿದ ಅವರು, ''ನನಗೆ ಸ್ಪಿನ್ ಬೌಲಿಂಗ್ ತಂತ್ರಗಾರಿಕೆ ಕಲಿಸಿಕೊಟ್ಟಿದ್ದೇ ಹರ್ಭಜನ್ ಸಿಂಗ್. ಇದೀಗ, 2017ರ ಆವೃತ್ತಿಯ ಐಪಿಎಲ್ ನಲ್ಲಿ ಅವರಿರುವ ತಂಡದಲ್ಲೇ ಆಡಲು ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ'' ಎಂದು ಹೇಳಿದರು.[ಐಪಿಎಲ್ 2017: ಹರಾಜಿನಲ್ಲಿ ಸೇಲ್ ಆಗದ ಟಾಪ್ 10 ಆಟಗಾರರು]
ಇದಲ್ಲದೆ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ದನೆ, ಕೀರನ್ ಪೊಲಾರ್ಡ್, ಹರ್ಭಜನ್ ಸಿಂಗ್, ರೋಹಿತ್ ಶರ್ಮಾ ಅವರಂಥ ದೈತ್ಯ ಪ್ರತಿಭೆಗಳ ಸಂಗಮವಾಗಿರುವ ಮುಂಬೈ ಇಂಡಿಯನ್ಸ್ ಸೇರುವ ಅವಕಾಶ ಸಿಕ್ಕಿದ್ದೇ ಪುಣ್ಯ ಎಂದು ಅವರು ತಿಳಿಸಿದರು.[ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ]
ಸೋಮವಾರ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಬಿಡ್ಡಿಂಗ್ ನಡೆಯುತ್ತಿರುವಾಗ ನಿಮ್ಮ ಮನಸ್ಥಿತಿ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಗೌತಮ್, ''ನಾನು ಮನೆಯಲ್ಲಿ ನನ್ನ ಕುಟುಂಬದೊಂದಿಗೆ ಬಿಡ್ಡಿಂಗ್ ನೇರಪ್ರಸಾರ ನೋಡುತ್ತಿದ್ದೆ. ಮುಂಬೈ ತಂಡಕ್ಕೆ ಆಡುವುದು ಸಿಕ್ಕ ಕೂಡಲೇ ಖುಷಿಯಾಯಿತು'' ಎಂದು ತಿಳಿಸಿದರು.[ಐಪಿಎಲ್ 2017 ಹರಾಜು : ಮಾರಾಟವಾದ ಆಟಗಾರರ ಪೂರ್ಣ ಪಟ್ಟಿ]
ಅಂದಹಾಗೆ, ಈ ಬಾರಿಯ ಐಪಿಎಲ್ ನಿಂದ ಬರುವ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಮನೆಯೊಂದನ್ನು ಖರೀದಿಸುವ ಆಲೋಚನೆ ಗೌತಮ್ ಗೆ ಇದೆಯಂತೆ.