ಮುಂಬೈ, ಜುಲೈ 13: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಭ್ರಷ್ಟಾಚಾರದ ಬೀಜ ಬಿತ್ತಲು ಯತ್ನಿಸಿದ ಮುಂಬೈನ ಯುವ ಕ್ರಿಕೆಟರ್ ರೊಬ್ಬರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಮಾನತು ಮಾಡಿದೆ.
ರಾಜಸ್ಥಾನ ರಾಯಲ್ಸ್ ನ ಹಿರಿಯ ಆಟಗಾರ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಅವರಿಗೆ ಆಮಿಷ ಒಡ್ಡಿದ ಆರೋಪದ ಮೇಲೆ ಹಿಕೇನ್ ಶಾ ಅವರನ್ನು ಬಿಸಿಸಿಐ ಅಮಾನತು ಮಾಡಿದೆ.ಲಭ್ಯ ಮಾಹಿತಿ ಪ್ರಕಾರ, ಈ ಸೀಸನ್ ನ ಐಪಿಎಲ್ ಆರಂಭದಲ್ಲೇ ಐಪಿಎಲ್ ಆಟಗಾರ ತಾಂಬೆ ಅವರನ್ನು ಭೇಟಿ ಮಾಡಿ ಮ್ಯಾಚ್ ಫಿಕ್ಸಿಂಗ್ ಗೆ ಸಹಕರಿಸುವಂತೆ ಶಾ ಕೇಳಿಕೊಂಡಿದ್ದಾನೆ.[ರೈನಾ, ಜಡೇಜ, ಬ್ರಾವೋಗೆ ಕ್ಲೀನ್ ಚಿಟ್!]
ಅದರೆ, ಇದಕ್ಕೊಪ್ಪದ ತಾಂಬೆ ತಕ್ಷಣವೇ ಈ ವಿಷಯವನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿದ್ದಾರೆ. ನಂತರ ಈ ಬಗ್ಗೆ ತನಿಖೆ ಕೈಗೊಂಡ ಬಿಸಿಸಿಐ ಅಧಿಕಾರಿಗಳಿಗೆ ಶಾ ತಪ್ಪಿತಸ್ಥ ಎಂದು ತಿಳಿದು ಬಂದಿದೆ. 30 ವರ್ಷ ವಯಸ್ಸಿನ ಶಾ, ಮುಂಬೈ ಪರ 37 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. []
ಐಪಿಎಲ್ 8ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿರುವ ಮುಂಬೈ ಮೂಲದ ರಣಜಿ ಆಟಗಾರನೊಬ್ಬನನ್ನು ಬುಕ್ಕಿಯೊಬ್ಬ ಸಂಪರ್ಕಿಸಿದ್ದ ಎಂಬ ವಿಷಯ ಹೊರಕ್ಕೆ ಬಂದಿದೆ. ಈ ಬಗ್ಗೆ ಹೆಡ್ ಲೈನ್ಸ್ ಟುಡೇ ಇಂಗ್ಲೀಷ್ ಸುದ್ದಿ ವಾಹಿನಿ ಏ.10ರಂದು ಸುದ್ದಿ ಪ್ರಸಾರ ಮಾಡಿತ್ತು. [ಐಪಿಎಲ್ 2015ಗೂ ತಟ್ಟಿದ ಫಿಕ್ಸಿಂಗ್ ಭೂತದ ಕಾಟ]
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ, ಕ್ರಿಕೆಟ್ ನಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಇಂಥ ಯಾವುದೇ ಘಟನೆ ನಡೆದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ. ಆಟಕ್ಕೆ ಕಳಂಕ ತರುವವರ ಬಗ್ಗೆ ಯಾವುದೇ ಕನಿಕರ ತೋರಿಸಲಾಗುವುದಿಲ್ಲ. ಮುಂದಿನ ಕ್ರಮವನ್ನು ಬಿಸಿಸಿಐನ ಶಿಸ್ತುಪಾಲನಾ ಸಮಿತಿ ಕೈಗೊಳ್ಳಲಿದೆ ಎಂದಿದ್ದಾರೆ.