ಬೆಂಗಳೂರು, ಮಾ.31: ಐಸಿಸಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಭಾರತದಲ್ಲಿ ಮುಂದಿನ ವಾರದಿಂದ ಇಂಡಿಯನ್ ಪ್ರಿಮಿಯರ್ ಲೀಗ್ 8 ಹವಾ ಶುರುವಾಗಲಿದೆ. ಈ ನಡುವೆ ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಬೌಲಿಂಗ್ ಕೋಚ್ ಗಳನ್ನು ಹೊಂದಿರುವ ಹೆಮ್ಮೆಯೊಂದಿಗೆ ಕಣಕ್ಕಿಳಿಯಲಿದೆ. ವಿಜಯ್ ಮಲ್ಯ ದೂರದೃಷ್ಟಿ ಈ ಬಾರಿ ಕ್ಲಿಕ್ ಆಗುವ ಸಾಧ್ಯತೆ ಹೆಚ್ಚಿದೆ.
ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ವಿಶ್ವಕಪ್ 2015ರಲ್ಲಿ ಕಾರ್ಯ ನಿರ್ವಹಿಸಿದ ಭರತ್ ಅರುಣ್ ಅವರು ಭಾರತಕ್ಕೆ ಮರಳಿದ್ದು, ಬೆಂಗಳೂರಿನಲ್ಲಿ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ವಿಶ್ವಕಪ್ ಗೂ ಮುನ್ನ ಭರತ್ ಅರುಣ್ ಎಂದರೆ ಯಾರು ಎಂದು ಪ್ರಶ್ನಿಸುತ್ತಿದ್ದವರು. ಈಗ ಭರತ್ ಅವರು ಆರ್ ಸಿಬಿಗೆ ಸಹಾಯಕ ಕೋಚ್ ಆಗಿ ಸೇರಿರುವುದು ಇತರೆ ತಂಡಕ್ಕೆ ಅಸೂಯೆ ಹುಟ್ಟಿಸಿದರೂ ಅಚ್ಚರಿ ಪಡಬೇಕಾಗಿಲ್ಲ. [ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]
ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಬೌಲರ್ ಗಳು 7 ಪಂದ್ಯಗಳಲ್ಲಿ 70 ವಿಕೆಟ್ ಗಳನ್ನು ಉದುರಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಭಾರತದ ಬೌಲರ್ ಗಳು ಅನನುಭವಿಗಳಾಗಿದ್ದರು ಅವರಲ್ಲಿ ಹುರುಪು ತುಂಬಿ ಉತ್ತಮ ಪ್ರದರ್ಶನ ಪಡೆಯುವಲ್ಲಿ ಸಫಲರಾದರು. [ಐಪಿಎಲ್ 8 ಹರಾಜು ಸಂಪೂರ್ಣ ವಿವರ]
ಬೌಲರ್ ಗಳ ಸಾಧನೆಯ ಇದರ ಹಿಂದಿನ ಶಕ್ತಿಯಾಗಿದ್ದ 52ವರ್ಷ ವಯಸ್ಸಿನ ಭರತ್ ಅವರು ಈಗ ಆರ್ ಸಿಬಿಯ ಮುಖ್ಯ ಬೌಲಿಂಗ್ ಕೋಚ್ ದಕ್ಷಿಣ ಆಫ್ರಿಕಾದ ಬೌಲಿಂಗ್ ದಿಗ್ಗಜ ಅಲಾನ್ ಡೋನಾಲ್ಡ್ ಜೊತೆ ಕೂಡಿ ಆರ್ ಸಿಬಿ ಬೌಲರ್ ಗಳಿಗೆ ತರಬೇತಿ ನೀಡಲಿದ್ದಾರೆ.[ಹೊಸ ಇನ್ನಿಂಗ್ಸ್ ಆರಂಭಿಸಿದ ರಿಕಿ ಪಾಂಟಿಂಗ್]
ಆರ್ ಸಿಬಿ ಸೂಪರ್ ಬೌಲಿಂಗ್ ಪಡೆ: ಡೇನಿಯಲ್ ವೆಟ್ಟೋರಿ ಅವರು ಮುಖ್ಯ ಕೋಚ್ ಆಗಿದ್ದರೆ, ಟ್ರೆಂಟ್ ವುಡ್ ಹಿಲ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಭರತ್ ಅರುಣ್ ಅವರ ತರಬೇತಿ ಪಡೆದ ಅಂಡರ್ 19 ಭಾರತ ತಂಡ 2012ರಲ್ಲಿ ವಿಶ್ವಕಪ್ ಗೆದ್ದಿದ್ದನ್ನು ಇಲ್ಲಿ ಮರೆಯುವಂತಿಲ್ಲ. ಇಂಥ ಉತ್ತಮ ಕೋಚ್ ಪಡೆಯೊಂದಿಗೆ ಮಲ್ಯ ಉತ್ತಮ ವೇಗಿಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡು ಜಾಣತನ ತೋರಿಸಿದ್ದಾರೆ. [ವೆಟ್ಟೋರಿ ಏಕದಿನ ಕ್ರಿಕೆಟ್ಟಿಗೆ ಗುಡ್ ಬೈ, ಆರ್ ಸಿಬಿಗೆ ಕೋಚ್]
ಭರತ್ ಅರುಣ್ ಅವರನ್ನು ಆರ್ ಸಿಬಿ ಸಹಾಯಕ ಕೋಚ್ ಆಗಿ ಆಯ್ಕೆ ಮಾಡಿದಾಗ ಮೂಗು ಮುರಿದವರು ಈಗ ಹುಬ್ಬೇರಿಸುತ್ತಿದ್ದಾರೆ. ಆರ್ ಸಿಬಿ ತಂಡದಲ್ಲಿ ವಿಶ್ವಕಪ್ ಹೀರೋ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ನ್ಯೂಜಿಲೆಂಡ್ ನ ಯುವ ವೇಗಿ ಆಡಂ ಮಿಲ್ನೆ, ಆಸ್ಟ್ರೇಲಿಯಾದ ಸೀನ್ ಅಬಾಟ್ (ಫಿಲ್ ಹ್ಯೂಸ್ ಗೆ ಬೌನ್ಸರ್ ಹಾಕಿದ ಖ್ಯಾತಿಯ) ಹಾಗೂ ಭಾರತದ ವೇಗಿ ವರುಣ್ ಅರೋನ್ ಇರುವುದರಿಂದ ಈ ಬಾರಿ ಉತ್ತಮ ಬೌಲಿಂಗ್ ದಾಳಿ ನಿರೀಕ್ಷಿಸಬಹುದು. (ಒನ್ ಇಂಡಿಯಾ ಸುದ್ದಿ)