ಕೋಲ್ಕತ್ತಾ, ಏಪ್ರಿಲ್ 29: ಹಿರಿಯ ಕ್ರಿಕೆಟರ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಸುಕ್ಮಾ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡಿರುವುದು ತಿಳಿದಿರಬಹುದು. ಈಗ ತಮ್ಮ ಉತ್ತಮ ನಡೆಯನ್ನು ಮುಂದುವರೆಸಿ, ಪಂದ್ಯ ಶ್ರೇಷ್ಠ ಪ್ರಶಸ್ತಿ ಮೊತ್ತವನ್ನುಹುತಾತ್ಮ ವೀರರಿಗೆ ಅರ್ಪಿಸಿ, ಅವರ ಕುಟುಂಬಕ್ಕೆ ದಾನ ಮಾಡಿದ್ದಾರೆ.ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡದ ಗೆಲುವಿಗೆ ಕಾರಣರಾಗಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಗಂಭೀರ್ ತಮ್ಮ ಪ್ರಶಸ್ತಿಯ ಮೊತ್ತವನ್ನು ಸುಕ್ಮಾ ದಾಳಿಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡು ಹುತಾತ್ಮರಾದಂತಹ ವೀರ ಯೋಧರಿಗೆ ಅರ್ಪಿಸಿದರು. ಡೆಲ್ಲಿ ವಿರುದ್ಧ ಅಜೇಯ 71 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.ಇದಕ್ಕೂ ಮುನ್ನ ಹುತಾತ್ಮರಾಗಿರುವ ಎಲ್ಲ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಗೌತಮ್ ಗಂಭೀರ್ ಅವರ ಫೌಂಡೇಶನ್ ನೋಡಿಕೊಳ್ಳಲಿದೆ, ಈ ಕುರಿತಂತೆ ಪ್ರಾಥಮಿಕ ಕೆಲಸ ಕಾರ್ಯಗಳು ಆರಂಭವಾಗಿದೆ ಎಂದುಗಂಭೀರ್ ಅವರ ಮ್ಯಾನೇಜರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಸುಕ್ಮಾದಲ್ಲಿದ್ದ ಸಿಆರ್ ಪಿಎಫ್ ಯೋಧರ 74ನೇ ಬಟಾಲಿಯನ್ ಶಿಬಿರದ ಮೇಲೆ ಮಾವೋವಾದಿಗಳು ಇತ್ತೆಚೆಗೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 25 ಜನ ಯೋಧರು ಹುತಾತ್ಮರಾಗಿದ್ದರು. ಜೊತೆಗೆ 6 ಜನ ಯೋಧರು ಗಾಯಗೊಂಡಿದ್ದರು.