ಆ ಮೊತ್ತ ಸಾಲದಾಗಿತ್ತು
ಮೊದಲಿಗೆ ಬ್ಯಾಟ್ ಮಾಡಿದ ಸನ್ ರೈಸರ್ಸ್ ಕೇವಲ 128 ರನ್ ಮೊತ್ತ ದಾಖಲಿಸಿದ್ದು ಮೊದಲನೇ ತಪ್ಪು. ಏಕೆಂದರೆ, ಎದುರಾಳಿಯಾಗಿರುವುದು ಕೋಲ್ಕತಾ ನೈಟ್ ರೈಡರ್ಸ್ ತಂಡ. ಹಾಗೆಂದ ಮೇಲೆ ಕನಿಷ್ಠ 180 ರನ್ ಗಳನ್ನಾದರೂ ಅದು ಸ್ಕೋರ್ ಬೋರ್ಡ್ ನಲ್ಲಿ ದಾಖಲಿಸಬೇಕಿತ್ತು.
ವೇಗಿಗಳನ್ನು ಎದುರಿಸದ ಬ್ಯಾಟ್ಸ್ ಮನ್
ಎರಡನೇಯದ್ದಾಗಿ, ಎದುರಾಳಿ ತಂಡದ ವೇಗಿಗಳ ದಾಳಿಯನ್ನು ಸಮರ್ಥವಾಗಿ ಎದುರಿಸದೇ ಇದ್ದಿದ್ದು ಸನ್ ರೈಸರ್ಸ್ ಮಾಡಿದ ಎರಡನೇ ತಪ್ಪು. ಆರಂಭಿಕ ಶಿಖರ್ ಧವನ್ ಕೊಂಚವಾದರೂ ಭೋರ್ಗರೆದಿದ್ದರೆ ಉತ್ತಮ ಮೊತ್ತ ಸಾಧಿಸಬಹುದಿತ್ತೇನೋ? ಅವರಷ್ಟೇ ಅಲ್ಲ, ಸನ್ ರೈಸರ್ಸ್ ತಂಡದ ಮಧ್ಯಮ ಕ್ರಮಾಂಕವೂ ಕುಸಿದಿದ್ದು ದುರಂತ. ಕೇನ್ ವಿಲಿಯಮ್ಸನ್, ವಿ. ಶಂಕರ್ ಕ್ರಮವಾಗಿ 24 ಹಾಗೂ 22 ರನ್ ಗಳಿಸಿದರು. ಆದರೆ, ಊಹೂಂ. ಟಿ20 ಎಂಬ ಹೊಡಿಬಡಿ ಪಂದ್ಯಗಳಲ್ಲಿ ಅದೇನೂ ಸಾಲದು. ದೊಡ್ಡ ಮೊತ್ತ ಪೇರಿಸಿದ್ದರೆ, ಮಳೆ ಬಂದಾಗ ಕೋಲ್ಕತಾಕ್ಕೆ 6 ಓವರ್ ಗಳಲ್ಲಿ 48 ರನ್ ಹೊಡೆಯುವ ಟಾರ್ಗೆಟ್ ನೀಡಲಾಗಿತ್ತಲ್ಲಾ, (ಡಕ್ವರ್ತ್ ಲೂಯಿಸ್ ನಿಯಮಗಳನುಸಾರ) ಆ ಟಾರ್ಗೆಟ್ ಪ್ರಾಯಶಃ 6 ಓವರ್ ಗಳಲ್ಲಿ 80 ರನ್ ಹೊಡೆಯುವ ಗುರಿ ಸಿಗುತ್ತಿತ್ತೇನೋ! ಹಾಗಾಗಿ, ಇವರು ಮೊದಲು ದೊಡ್ಡ ಮೊತ್ತ ಪೇರಿಸಿದ್ದರೆ ಪಂದ್ಯವನ್ನು ತಮ್ಮತ್ತ ತಿರುಗಿಸಿಬಿಡಬಹುದಿತ್ತು.
ಕೋಲ್ಕತಾ ಕೂಡ ಆರಂಭದಲ್ಲಿ ತಿಣುಕಾಡಿತ್ತು
ಒಟ್ಟಾರೆಯಾಗಿ ಹೇಳಬೇಕೆಂದರೆ, ಬ್ಯಾಟಿಂಗ್ ವೈಫಲ್ಯದಿಂದಲೇ ಸನ್ ರೈಸರ್ಸ್ ಕಡಿಮೆ ಮೊತ್ತ ಪೇರಿಸಬೇಕಾಯಿತು. ಹಾಗೊಂದು ವೇಳೆ, ಭರ್ಜರಿ ಮೊತ್ತವನ್ನು ಅದು ಪೇರಿಸಿದ್ದರೆ, ಕೋಲ್ಕತಾಕ್ಕೆ ಪಂದ್ಯ ಗೆಲ್ಲುವುದು ಅಸಂಭವ ಎನ್ನುವಂತಾಗಿ ಬಿಡುತ್ತಿತ್ತು. ಏಕೆಂದರೆ, ಆ ತಂಡವೂ ತನ್ನ ಇನಿಂಗ್ಸ್ ಆರಂಭಿಸಿದ ಬೆನ್ನಲ್ಲೇ ಕೇವಲ 12 ರನ್ ಗಳಿಗೆ ಮೂವರು ಅಗ್ರ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಗಂಭೀರ್ ಅವರನ್ನು ಕಟ್ಟಿಹಾಕಲಿಲ್ಲ
ಕೋಲ್ಕತಾ ಇನಿಂಗ್ಸ್ ವೇಳೆ ಘರ್ಜಿಸಿದ ಸನ್ ರೈಸರ್ಸ್ ಬೌಲರ್ ಗಳು ಆನಂತರ ಘರ್ಜಿಸಲಿಲ್ಲ. ಆರಂಭದಲ್ಲಿ ರಾಬಿನ್ ಉತ್ತಪ್ಪ, ಲಿನ್, ಯೂಸುಫ್ ಪಠಾಣ್ ಅವರನ್ನು ಬೇಗನೇ ಪೆವಿಲಿಯನ್ ಗೆ ಅಟ್ಟಿದ ಗಟ್ಟಿತನ, ನಾಯಕ ಗೌತಮ್ ಗಂಭೀರ್ ಅವರನ್ನು ಔಟ್ ಮಾಡುವುದರಲ್ಲಿ ಕಾಣಲಿಲ್ಲ.
ಯಶಸ್ಸಿನ ಒಂದು ಭಾಗ ಅವರಿಗೇ ಸಲ್ಲಬೇಕು.
ಕೋಲ್ಕತಾ ತಂಡದ ಗೆಲುವಿನ ಶ್ರೇಯಸ್ಸು ಗಂಭೀರ್ ಗೆ ಸಲ್ಲಬೇಕು. ತಂಡವು ಸಂಕಷ್ಟದಲ್ಲಿದ್ದಾಗ ಗೌತಮ್ ಅವರು, ಕೇವಲ 19 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 32 ರನ್ ಗಳಿಸಿದ ಅವರು ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದು ಮಾತ್ರ ರೋಚಕ. ಸ್ಲೋ ಪಿಚ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಅವರ ಆಟ ಅನುಕರಣೀಯ. ಹಾಗಾಗಿ, ಮಳೆ ಬಂದಿದ್ದೇ ಪಂದ್ಯ ಟರ್ನ್ ಆಗಲು ಕಾರಣ ಎನ್ನುವ ಹಾಗೇ ಇಲ್ಲ.