ಬ್ಯಾಟಿಂಗ್ ನಲ್ಲಿ ಚಿಗುರಿಕೊಂಡಿತು
ಬೌಲಿಂಗ್ ನಲ್ಲಿ ಎಡವಿ, ಕೋಲ್ಕತಾ ತಂಡಕ್ಕ 187 ರನ್ ಗಳ ಬೃಹತ್ ಸ್ಕೋರ್ ಮಾಡಲು ಅನುವು ಮಾಡಿಕೊಟ್ಟಿದ್ದು ಗುಜರಾತ್ ತಂಡದ ವೈಫಲವ್ಯವೇ ಸರಿ. ಆದರೆ, ಆ ವೈಫಲ್ಯವನ್ನು ಮೆಟ್ಟಿ ನಿಂತಿದ್ದು ಬ್ಯಾಟಿಂಗ್ ಲೈನ್ ಅಪ್.
ಮಧ್ಯಮ ಕ್ರಮಾಂಕ ಕೊಂಚ ನಿರಾಳ
ಕ್ರಿಕೆಟ್ ಪಂದ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಟಿ20 ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಗಳ ಮೇಲೆ ಬಹು ದೊಡ್ಡ ಜವಾಬ್ದಾರಿ ಇರುತ್ತದೆ. ಅವರು ಉತ್ತಮವಾಗಿ ಆಡಿದರೆ, ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಇರುವುದಿಲ್ಲ. ಇಲ್ಲಿಯೂ ಹಾಗೇ ಆಗಿದ್ದು. ಗುಜರಾತ್ ತಂಡದ ಆರಂಭಿಕ ಆಟಗಾರರಾದ ಆರೋನ್ ಫಿಂಚ್, ಬ್ರೆಂಡನ್ ಮೆಕಲಂ ಅವರು ಉತ್ತಮ ಅಡಿಪಾಯ ಹಾಕಿದ್ದು, ಮಧ್ಯಮ ಕ್ರಮಾಂಕವು ಕೊಂಚ ಒತ್ತಡ ರಹಿತವಾಗಿ ಆಡಲು ಸಾಧ್ಯವಾಯಿತು.
ಜಯಕ್ಕೆ ಉತ್ತಮ ಅಡಿಪಾಯ
ಆರೋನ್ ಫಿಂಚ್ ಹಾಗೂ ಬ್ರೆಂಡನ್ ಮೆಕಲಂ ಜೋಡಿ, ಗುಜರಾತ್ ಇನಿಂಗ್ಸ್ ಮೊದಮೊದಲು ಸಾಧಾರಣವಾಗಿಯೇ ಆಗಿತ್ತು. ಅದರಲ್ಲೂ ಮಿಂಚಿನ ಆರೋನ್ ಫಿಂಚ್, ಬೌಂಡರಿ, ಸಿಕ್ಸರ್ ಗಳ ಮಳೆ ಸುರಿದರು. 2ನೇ ಓವರ್ ನಲ್ಲಿ 2 ಬೌಂಡರಿ, 1 ಸಿಕ್ಸರ್, 3ನೇ ಓವರ್ ನಲ್ಲೂ 2 ಬೌಂಡರಿ, 1 ಸಿಕ್ಸರ್ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು.
ಸುರೇಶ್ ಸ್ಫೋಟಕ ಬ್ಯಾಟಿಂಗ್
ಕೆಲವೊಮ್ಮೆ ತಂಡದ ಆರಂಭಿಕರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಧ್ಯಮ ಕ್ರಮಾಂಕದವರು ಗೆಲುವಿನ ಸೌಧ ಕಟ್ಟುವಲ್ಲಿ ಎಡವುತ್ತಾರೆ. ಆದರೆ, ಇಲ್ಲಿ ಹಾಗಾಗಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಸುರೇಶ್ ರೈನಾ, ತಮ್ಮ ಜವಾಬ್ದಾರಿಯರಿತು ತೂಕಬದ್ಧವಾದ ಆಟವಾಡಿದರು. ಅವರ ಸ್ಫೋಟಕ ಬ್ಯಾಟಿಂಗ್ (84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್) ತಂಡವನ್ನು ಅಕ್ಷರಶಃ ಗೆಲುವಿನ ಕಡೆಗೆ ಹೊರಳಿಸಿತು.
ಅಪಾರ ಅನುಭವವೇ ಕಾರಣ
ಅದರಲ್ಲೂ ರೈನಾ ಆಟ ವೀರೋಚಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಸಲಿಗೆ ಅವರು ಕ್ರೀಸ್ ನಲ್ಲಿ ಆರ್ಭಟಿಸುತ್ತಿದ್ದಾಗ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ದಿನೇಶ್ ಕಾರ್ತೀಕ್, ಈಶನ್ ಕಿಶನ್ ಅವರು ಬೇಗನೇ ಔಟಾದರು. ಹೀಗೆ, ಕಣ್ಣ ಮುಂದೆಯೇ ವಿಕೆಟ್ ಗಳು ಉರುಳುತ್ತಿದ್ದಾಗ ಅದು, ಕ್ರೀಸ್ ನ ಮತ್ತೊಂದು ತುದಿಯಲ್ಲಿ ನಿಂತಿರುವ ಬ್ಯಾಟ್ಸ್ ಮನ್ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಅವರೂ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಆದರೆ, ಇಲ್ಲಿ ಹಾಗಾಗಲಿಲ್ಲ. ರೈನಾ ಹಿಂದಿರುವ ಅವರ ಅಪಾರ ಅನುಭವ ಇಂಥ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಛಾತಿಯನ್ನು ಅವರಿಗೆ ತಂದುಕೊಟ್ಟಿತು.
ಗೆಲುವಿನ ದಡ ಸೇರಿಸಿದ ರವೀಂದ್ರ ಜಡೇಜಾ
ರೈನಾ ಅವರಂತೆಯೇ, ಇಲ್ಲಿ ಖಂಡಿತವಾಗಿಯೂ ನೆನೆಪಿಸಿಕೊಳ್ಳಬೇಕಾದ ಮತ್ತೊಬ್ಬ ಬ್ಯಾಟ್ಸ್ ಮನ್ ಎಂದರೆ, ಅದು ರವೀಂದ್ರ ಜಡೇಜಾ. ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ತಂಡವನ್ನು ಗೆಲುವಿನ ಗೆರೆಯ ಬಳಿ ತಂದು ನಿಲ್ಲಿಸಿದಾಗ, ಅದನ್ನು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಸ್ವಲ್ಪ ಪುಷ್ ಮಾಡಿದರೂ ಸಾಕು ತಂಡ ಆ ಗೆಲುವಿನ ಗೆರಯನ್ನು ದಾಟಿಬಿಡುತ್ತದೆ. ಗುಜರಾತ್ ತಂಡದ ವಿಚಾರದಲ್ಲಿ ರೈನಾ ಅವರು ತಂಡವನ್ನು ಹೀಗೆ ಗೆಲುವಿನ ಗೆರೆಯ ಬಳಿ ತಂದರೂ, ಅದನ್ನು ಯಶಸ್ವಿಯಾಗಿ ಗುರಿ ಮುಟ್ಟಿಸಿದ್ದು ರವೀಂದ್ರ ಜಡೇಜಾ. 13 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸೇರಿದಂತೆ 19 ರನ್ ಗಳಿಸಿದ ಅವರು, ತಂಡಕ್ಕೆ ಅರ್ಹ ಜಯ ತಂದುಕೊಟ್ಟರು.