ಮುಂಬೈ, ಮೇ.6: ಮಳೆಗೆ ಸಿಲುಕಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುವರಾಜ್ ಸಿಂಗ್ 57ರನ್ ಗಳಿಸಿದರೂ ಡೆಲ್ಲಿ ಡೇರ್ ಡೆವಿಲ್ಸ್ ಗೆಲುವಿನ ಹಾದಿ ಹಿಡಿಯಲಿಲ್ಲ. ಅದರೆ, ಈ ಮೂಲಕ ಟೀಕಾಕಾರರಿಗೆ ಯುವಿ ತಕ್ಕ ಉತ್ತರ ನೀಡಿದ್ದಾರೆ. ಈಗ ಸಮಯ ಬಂದಿದೆ, ನಾನು ನನ್ನ ಅಟದ ಮೂಲಕ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದು ಎಡಗೈ ಬ್ಯಾಟ್ಸ್ ಮನ್ ಹೇಳಿದ್ದಾರೆ.
| ಐಪಿಎಲ್ ವಿಶೇಷ ಪುಟ | ಐಪಿಎಲ್ ಅಂಕ ಪಟ್ಟಿ
ಯುವರಾಜ್ ಅಬ್ಬರದ ಬ್ಯಾಟಿಂಗ್ 44 ಎಸೆತಗಳಲ್ಲಿ 57 ರನ್ (7X4, 2X6) ನೆರವಿನಿಂದ ಡೆಲ್ಲಿ ತಂಡ 152/6 ಸ್ಕೋರ್ ಮಾಡಿತ್ತು. ಮಳೆಗೆ ಪಂದ್ಯ ಆಹುತಿಯಾಗುವ ಲಕ್ಷಣಗಳು ಕಂಡು ಬಂದಿತ್ತು. [ಐಪಿಎಲ್ : ವೈಯಕ್ತಿಕ ರನ್ ಗಳಿಕೆ, ಗೇಲ್ ಇಸ್ ಕಿಂಗ್ ]
ಪುನಃ ಪಂದ್ಯ ಶುರುವಾದಾಗ ಡಕ್ವರ್ಥ್ ಲೂಯಿಸ್ ನಿಯಮ ಪ್ರಕಾರ ಡೆಲ್ಲಿ ಪರವಾಗೇ ಪಂದ್ಯ ಸಾಗುತ್ತಿತ್ತು. ಅದರೆ, ಅಂಬಟಿ ರಾಯುಡು, ರೋಹಿತ್ ಶರ್ಮ್, ಪೊಲ್ಲಾರ್ಡ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ ಮುಂಬೈಗೆ ಜಯ ತಂದಿತ್ತರು.
ಯುವರಾಜ್ ಪ್ರತಿಕ್ರಿಯೆ: ನನ್ನ ಕೆಲಸ ಕ್ರಿಕೆಟ್ ಆಡುವುದು, ಟೀಕಾಕಾರರ ಕೆಲಸ ಅವರು ಮಾಡಲಿ. ನಾನು ಟಿವಿ, ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಓದುವುದಿಲ್ಲ. ನನಗೆ ಇದಕ್ಕೆಲ್ಲ ಪುರುಸೊತ್ತಿಲ್ಲ. ಹೊಗಳಿಕೆ, ತೆಗಳಿಕೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ನನ್ನ ಕರ್ತವ್ಯ ನಾನು ಸರಿಯಾಗಿ ನಿಭಾಯಿಸುವುದು ಮುಖ್ಯ ಎಂದು ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಟಿ20 ಪಂದ್ಯದಲ್ಲಿ 20ರನ್ ಗಳಿಕೆ ಕಷ್ಟವೇನಲ್ಲ, ಅದರೆ, 35 ಪ್ಲಸ್ ರನ್ ಸತತವಾಗಿ ಗಳಿಸುವುದು ಮುಖ್ಯ. ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿ ಲಯ ಕಂಡುಕೊಳ್ಳಲು ಐಪಿಎಲ್ ಉತ್ತಮ ವೇದಿಕೆ. ತಂಡದ ಗೆಲುವಿಗಾಗಿ ಆಡುವುದು ಮುಖ್ಯ ಎಂದರು.
ಐಪಿಎಲ್ 2015ರಲ್ಲಿ 10 ಪಂದ್ಯವಾಡಿರುವ ಡೆಲ್ಲಿ ತಂಡ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್ ಕನಸು ಕಾಣಬಹುದಾಗಿದೆ. ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರೇಳು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಫೈನಲ್ ತಲುಪಿ ಕಪ್ ಎತ್ತಿದ ಉದಾಹರಣೆ ಇದೆ. ನಾವು ನಮ್ಮ ಪ್ರಯತ್ನ ಮುಂದುವರೆಸುತ್ತೇವೆ ಎಂದು ಯುವರಾಜ್ ಹೇಳಿದರು. (ಐಎಎನ್ಎಸ್)