ಬೆಂಗಳೂರು, ಮೇ.4: ಮಳೆಗೆ ಸಿಲುಕಿದ ಪಂದ್ಯದಲ್ಲಿ ಗೌತಮ್ ಗಂಭೀರ್ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಜಯ ಸಾಧಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದರೆ, ದೆಹಲಿಯ ಈ ಇಬ್ಬರು ಪ್ರತಿಭಾವಂತ ಆಟಗಾರರು ಐಪಿಎಲ್ ನಲ್ಲಿ ಮತ್ತೊಮ್ಮೆ ಕಿತ್ತಾಡಿಕೊಂಡ ಘಟನೆ ವರದಿಯಾಗಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ 6ರಲ್ಲಿ ಕೊಹ್ಲಿ ಹಾಗೂ ಗಂಭೀರ್ ಮೈದಾನದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಕಿತ್ತಾಡಿದ್ದು ನಿಮಗೆ ನೆನಪಿರಬಹುದು. ಈಗ ಐಪಿಎಲ್ 2015ರಲ್ಲಿ ಇತಿಹಾಸ ಮರುಕಳಿಸಿದೆ.[ಮನದೀಪ್ ಮನಮೋಹಕ, ಕೆಕೆಆರ್ ಗೆ ಸೋಲು]
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ(ಮೇ.2) ನಡೆದ ಪಂದ್ಯದಲ್ಲಿ ಹಳೆ ದ್ವೇಷವೋ, ಗೆಲುವಿನ ಹುಂಬತನವೋ, ಸೋಲಿನ ಅವಮಾನವೋ ಇಬ್ಬರು ಪರಸ್ಪರ ಮುಖ ಕೊಟ್ಟು ಮಾತನಾಡಿಲ್ಲ. ಪಂದ್ಯದ ಬಳಿಕ ಕೈ ಕೈ ಕುಲುಕುತ್ತಾ ನಗೆ ಬೀರಬೇಕಿದ್ದ ನಾಯಕರೇ ಮುಖ ಸಿಂಡರಿಸಿಕೊಂಡ ಘಟನೆ ನಡೆದಿದೆ.
ಐಪಿಎಲ್ 2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎರಡು ಬಾರಿ ಮುಖಾಮುಖಿಯಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡು ಬಾರಿಯೂ ಹಾಲಿ ಚಾಂಪಿಯನ್ ತಂಡವನ್ನು ಬಗ್ಗು ಬಡಿದಿದೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಶನಿವಾರ ನಡೆದ 10 ಓವರ್ಸ್ ಗಳ ಹಣಾಹಣಿಯಲ್ಲೂ ಕೆಕೆಆರ್ ಕೊಟ್ಟಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಆರ್ ಸಿಬಿ ರೋಚಕವಾಗಿ ದಾಟಿ ಏಳು ವಿಕೆಟ್ ಗಳ ಜಯ ದಾಖಲಿಸಿತು. ಇದಕ್ಕೂ ಮುನ್ನ ಈಡೆನ್ ಗಾರ್ಡನ್ಸ್ ನಲ್ಲಿ ಆರ್ ಸಿಬಿ 3 ವಿಕೆಟ್ ಗಳ ಜಯ ಪಡೆದಿತ್ತು.
ಇಬ್ಬರು ಉಗ್ರ ಪ್ರತಾಪಿಗಳೆ: ಕೊಹ್ಲಿ ಹಾಗೂ ಗಂಭೀರ್ ಇಬ್ಬರೂ ದೆಹಲಿ ಮೂಲದ ಆಟಗಾರರು. ಬಿರುಸಿನ ಹೊಡೆತಕ್ಕೆ ಹೆಸರಾದವರು. ಜೊತೆಗೆ ಇಬ್ಬರೂ ಉಗ್ರಪ್ರತಾಪಿಗಳು, ಭಾವನೆಗಳನ್ನು ಅದುಮಿಟ್ಟುಕೊಂಡು ಧೋನಿ ರೀತಿ ಕೂಲ್ ಎನಿಸಿಕೊಂಡವರಲ್ಲ. ಸಿಟ್ಟು ನೆತ್ತಿಗೇರಿದಾಗ ಮೈದಾನದಲ್ಲೆ ಆರ್ಭಟಿಸಿದವರು.
ಆರ್ ಸಿಬಿ ಆಟಗಾರ ಮನದೀಪ್ ಎರಡು ಸಿಕ್ಸರ್ ಎತ್ತಿ ಪಂದ್ಯ ಗೆಲ್ಲಿಸಿಕೊಟ್ಟ ಮೇಲೆ ಕೊಹ್ಲಿ ಅವರು ವಿಜಯೋತ್ಸವ ಆಚರಿಸುವ ಭರದಲ್ಲಿ ಗಂಭೀರ್ ಜೊತೆ ಮತ್ತೊಮ್ಮೆ ಮಾತಿನ ಜಟಾಪಟಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
2013ರಲ್ಲಿ ಕೊಹ್ಲಿ ಹಾಗೂ ಗಂಭೀರ್ ಕಿತ್ತಾಡುವಾಗ ಕೆಕೆಆರ್ ಆಟಗಾರ ರಜತ್ ಭಾಟಿಯಾ ಅಡ್ಡ ಬಂದಿದ್ದರು. ಆದರೆ ಅಷ್ಟರಲ್ಲಿ ಮಾಧ್ಯಮಗಳ ಕಣ್ಣಿಗೆ ಇಬ್ಬರು ಬಿದ್ದಿದ್ದರು. ಈಗ ಎರಡು ವರ್ಷಗಳ ಇದೇ ಸ್ಥಿತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
ಆದರೆ, ಏನೇನು ಮಾತಾಡಿಕೊಂಡಿದ್ದಾರೆ ತಿಳಿದು ಬಂದಿಲ್ಲ. ಈಗಿನ ಪರಿಸ್ಥಿತಿ ಗಮನಿಸಿದರೆ ಎರಡು ತಂಡಗಳು ಪ್ಲೇ ಆಫ್ ತಲುಪುವ ನಿರೀಕ್ಷೆಯಿದೆ. ಮತ್ತೊಮ್ಮೆ ಕೊಹ್ಲಿ-ಗಂಭೀರ್ ತಾಳ್ಮೆ ಕಳೆದುಕೊಳ್ಳದಿರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಇಷ್ಟಕ್ಕೂ ಇಬ್ಬರ ನಡುವೆ ಅಂಥದ್ದೇನು ವೈಮನಸ್ಯ ಇದೆ ಯಾರಿಗೂ ತಿಳಿದಿಲ್ಲ. (ಒನ್ ಇಂಡಿಯಾ ಸುದ್ದಿ)