ನವದೆಹಲಿ, ಮೇ 22: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ದಂಧೆ ಹತ್ತಿಕ್ಕಲು ಜಾರಿ ನಿರ್ದೇಶನಾಲಯ ಪಣ ತೊಟ್ಟಂತೆ ಕಾರ್ಯ ನಿರ್ವಹಿಸುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ದೇಶದ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಿ ಹಲವಾರು ಬುಕ್ಕಿಗಳನ್ನು ಬಂಧಿಸಿದ್ದಾರೆ.
ದೆಹಲಿ, ಜೈಪುರ, ಮುಂಬೈ ಸೇರಿದಂತೆ ಹಲವು ನಗರಗಳ ಕೆಲವು ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಐವರನ್ನು ಬಂಧಿಸಿ ಹಲವು ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದಾರೆ. ಈ ಬುಕ್ಕಿಗಳ ಕಾರ್ಯವ್ಯಾಪ್ತಿ ಭಾರತದ ಹೊರಗೂ ಹರಡಿದ್ದು, ಹವಾಲ ಹಣವನ್ನು ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸುತ್ತಿದ್ದರು ಎಂದು ತಿಳಿದು ಬಂದಿದೆ. [ಐಪಿಎಲ್ ವಿಶೇಷ ಪುಟ]
ಗುಜರಾತಿನ ಅಹ್ಮದಾಬಾದ್, ಮುಂಬೈ, ದೆಹಲಿ ಮತ್ತಿತರ ನಗರಗಳಲ್ಲಿ ಶೋಧಕಾರ್ಯ ಮುಂದುವರೆದಿದೆ. ಆ ಸಂದರ್ಭ ಬೆಟ್ಟಿಂಗ್ ದಂಧೆಯಲ್ಲಿ ಅಪಾರ ಪ್ರಮಾಣದ ಹಣ ಹರಿದಾಡಿದ್ದು, ಪ್ರಸ್ತುತ ಐಪಿಎಲ್-8ರಲ್ಲಿಯೂ ಸಾಕಷ್ಟು ಹಣದ ಹೂಡಿಕೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇಡಿ ಅಧಿಕಾರಿಗಳ ಈ ದಾಳಿ ಇನ್ನೂ ಕೆಲವು ದಿನ ಇತರ ಸ್ಥಳಗಳಲ್ಲೂ ಮುಂದುವರಿಯುವ ನಿರೀಕ್ಷೆಯಿದೆ.
ಒಂದು ವರದಿಯ ಪ್ರಕಾರ ಐಪಿಎಲ್ನ ವಿವಿಧ ಆವೃತ್ತಿಗಳಲ್ಲಿಯೂ ಫಿಕ್ಸಿಂಗ್ ಮತ್ತು ಭಾರಿ ಪ್ರಮಾಣದ ಬೆಟ್ಟಿಂಗ್ ನಡೆದಿರುವ ಬಗ್ಗೆ ಮಾಹಿತಿಗಳನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಈ ಬೆಟ್ಟಿಂಗ್ ದಂಧೆಯಲ್ಲಿ 1,000 ದಿಂದ 4 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂಬುದು ಅಧಿಕಾರಿಗಳ ಅಂದಾಜಾಗಿದೆ.
ಛೋಟಾ ಮುಂಬೈ ಮೇಲೆ ಕಣ್ಣು: ಕರ್ನಾಟಕದ ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಈ ಬಾರಿ ಭಾರಿ ಪ್ರಮಾಣದಲ್ಲಿ ಬೆಟ್ಟಿಂಗ್ ನಡೆದಿದೆ. ಮುಂಬೈನ ಪಂಟರ್ ಗಳಾದ ಸುನಿಲ್ ಭಾಟಿಯಾ, ಜುಪಿಟರ್, ಪವನ್ ಜೈಪುರ್, ರಮೇಶ್ ವ್ಯಾಸ್, ಟಿಂಕು ಮಾಂಡಿ ಮುಂತಾದವರ ಜೊತೆ ಹುಬ್ಬಳ್ಳಿಯ ದಂಧಾಕೋರರು ನೇರ ಸಂಪರ್ಕ ಹೊಂದಿದ್ದು, ಕರ್ನಾಟಕದ ಉಳಿದೆಡೆಗೆ ಇವರಿಂದ ಜಾಲ ಹರಡಿಕೊಂಡಿರುವ ಮಾಹಿತಿ ಸಿಕ್ಕಿದೆ.
ಬಂಧಿತರ ಮೇಲೆ ಐಪಿಸಿ ಸೆಕ್ಷನ್ 420, 467,419,418,471, 120(ಬಿ) ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಶೇಷವೆಂದರೆ ಇಡಿ ಅಧಿಕಾರಿಗಳು ಬುಕ್ಕಿಗಳ ಮೇಲೆ ಜಾರಿ ಮಾಡಿರುವ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್ಎ) ಪ್ರಕಾರ ಯಾವ ಆರೋಪಿಯೂ ಜಾಮೀನು ಪಡೆದು ಹೊರಬರುವಂತಿಲ್ಲ.(ಪಿಟಿಐ)