ಬೆಂಗಳೂರು, ಡಿಸೆಂಬರ್ 26: ಮುಂಬರುವ ಇಂಗ್ಲೆಂಡ್ ಏಕದಿನ ಕ್ರಿಕೆಟ್ ಸರಣಿಯಿಂದ ಟೀಂ ಇಂಡಿಯಾದ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಹಾಗೂ ಆಫ್ ಸ್ಪಿನ್ನರ್ ಜಯಂತ್ ಯಾದವ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಜನವರಿ 15ರಿಂದ ಏಕದಿನ ಸರಣಿ ಆರಂಭವಾಗಲಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್, ಜಡೇಜ ಹಾಗೂ ಜಯಂತ್ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ನಂತರ ಬಾಂಗ್ಲಾದೇಶ ವಿರುದ್ಧ ಒಂದು ಟೆಸ್ಟ್ ಪಂದ್ಯ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ.
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅಶ್ವಿನ್ ಹಾಗೂ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಸರಣಿಯಲ್ಲಿ ಚೊಚ್ಚಲ ಪಂದ್ಯವಾಡಿದ್ದ ಜಯಂತ್ ಅವರು ಆಲ್ ರೌಂಡರ್ ಆಟವಾಡಿ ಗಮನ ಸೆಳೆದಿದ್ದರು. ಈಗ ಇಂಗ್ಲೆಂಡ್ ಸರಣಿಗೆ ಅಮಿತ್ ಮಿಶ್ರಾ, ಆಲ್ ರೌಂಡರ್ ಕೇದಾರ್ ಜಾಧವ್ ಅವರನ್ನು ಬಳಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.
ಗಾಯಾಳುಗಳ ಪಟ್ಟಿ: ಗಾಯಗೊಂಡಿರುವ ವೇಗಿ ಮೊಹಮ್ಮದ್ ಶಮಿ ಅವರು ಈಗಾಗಲೇ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಇಶಾಂತ್ ಶರ್ಮ ಅವರು ತಂಡ ಸೇರುವ ನಿರೀಕ್ಷೆಯಿದೆ. ಜತೆಗೆ ಹಿರಿಯ ವೇಗಿ ಆಶೀಶ್ ನೆಹ್ರಾ ಅವರು ಮತ್ತೊಮ್ಮೆ ಏಕದಿನ ತಂಡಕ್ಕೆ ಮರಳುವ ಸಾಧ್ಯತೆಯಿದೆ.
ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ಸರಣಿಯಿಂದ ಹೊರ ಬಿದ್ದಿದ್ದು, ಶಿಖರ್ ಧವನ್ ಅವರು ತಂಡ ಸೇರಲಿದ್ದಾರೆ. ಚೆನ್ನೈನಲ್ಲಿ ತ್ರಿಶತಕ ಸಿಡಿಸಿದ ಕರುಣ್ ನಾಯರ್ ಅವರಿಗೆ ಅವಕಾಶ ಸಿಗಬಹುದು. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಕರುಣ್ ಮೊದಲ ಪಂದ್ಯವಾಡಿದ್ದರು. ಇದೇ ರೀತಿ ಕೆಎಲ್ ರಾಹುಲ್ ಕೂಡಾ ಏಕದಿನ ತಂಡ ಸೇರಲು ಉತ್ಸುಕರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯ ಹಾಗೂ 3 ಟಿ20 ಪಂದ್ಯಗಳನ್ನು ಭಾರತ ಆಡಲಿದೆ.ಎಂಎಸ್ ಧೋನಿ ಟೀಂ ಇಂಡಿಯಾ ನಾಯಕರಾಗಿದ್ದಾರೆ. ಇಯಾನ್ ಮಾರ್ಗನ್ ಅವರು ಇಂಗ್ಲೆಂಡ್ ನಾಯಕರಾಗಿದ್ದಾರೆ.(ಒನ್ಇಂಡಿಯಾ ಸುದ್ದಿ)