ಮುಂಬೈ, ಜನವರಿ 29: ಅಂಡರ್ - 19 ಭಾರತ ಕ್ರಿಕೆಟ್ ತಂಡದ ದೈಹಿಕ ತರಬೇತುದಾರರ ರಾಜೇಶ್ ಸಾವಂತ್ ಅವರ ಮೃತದೇಹ, ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಪತ್ತೆಯಾಗಿದೆ
40 ವರ್ಷದ ಸಾವಂತ್ ಅವರು ಭಾನುವಾರ ಬೆಳಗ್ಗೆ ಅಭ್ಯಾಸಕ್ಕೆ ಆಗಮಿಸಿರಲಿಲ್ಲ. ಹಾಗಾಗಿ ತಂಡದ ಸದಸ್ಯರು ಅವರನ್ನು ಹುಡುಕುತ್ತಾ ಹೋಟೆಲ್ ಗೆ ಬಂದು ನೋಡಿದರೆ, ಸಾವಂತ್ ಅವರ ಮೃತದೇಹ ಪತ್ತೆಯಾಗಿದೆ.
ಕೊಠಡಿಯ ಬಾಗಿಲು ತಟ್ಟಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಬಾಗಿಲು ತೆರೆಯದಿದ್ದಾಗ ಹೋಟೆಲ್ ಸಿಬ್ಬಂದಿ ಸಹಾಯದಿಂದ ನಕಲಿ ಕೀ ಬಳಸಿ ಬಾಗಿಲು ತೆಗೆದಿದ್ದಾರೆ. ಆದರೆ ಸಾವಂತ್ ನಿಷ್ಚಲವಾಗಿ ಹಾಸಿಗೆಯ ಮೇಲೆ ಬಿದ್ದಿದ್ದರು. ನಂತರ ತಂಡದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ, ಸಾವಂತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಮೇಲ್ನೋಟಕ್ಕೆ ಹೃದಯಾಘಾತ ಆಗಿರಬಹುದು ಎಂದೆನಿಸುತ್ತಿದೆ, ಮರಣೋತ್ತರ ಪರೀಕ್ಷೆಯ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಡಿಸಿಪಿ ಮನೋಜ್ ಕುಮಾರ್ ಸರ್ಮಾ ತಿಳಿಸಿದ್ದಾರೆ.
ಭಾರತ ಅಂಡರ್-19 ತಂಡ ಇಂಗ್ಲೆಂಡ್ ವಿರುದ್ಧ 50 ಓವರ್ಗಳ 5 ಮತ್ತು 4 ದಿನಗಳ 2 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲು ಸಿದ್ದತೆ ನಡೆಸಿತ್ತು. ಸೋಮವಾರ ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಪ್ರಾರಂಭವಾಗಲಿದೆ.