ಪಾಟ್ನ, ಜ. 13: ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕ ಇಶಾನ್ ಕಿಶಾನ್ ಗೆ ಪಾಟ್ನ ಪೊಲೀಸರು ಸಕತ್ ಗೂಸಾ ಕೊಟ್ಟು ಬಂಧಿಸಿದ ಘಟನೆ ನಡೆದಿದೆ. ಇಶಾನ್ ಚಲಿಸುತ್ತಿದ್ದ ಕಾರು ಆಟೋರಿಕ್ಷಾಕ್ಕೆ ಬಡಿದು ಹಲವರಿಗೆ ಗಾಯಗಳಾಗಿತ್ತು.
ಲಭ್ಯ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ ಇಶಾನ್ ಅವರು ತಮ್ಮ ತಂದೆಯ ಕಾರನ್ನು ತೆಗೆದುಕೊಂಡು ವೇಗವಾಗಿ ಚಲಾಯಿಸಿದ್ದಾರೆ. ಮಿತಿಮೀರಿದ ವೇಗದಿಂದ ನಿಯಂತ್ರಣಕ್ಕೆ ಸಿಗದೆ ಆಟೋರಿಕ್ಷಾಕ್ಕೆ ಗುದ್ದಿದ್ದಾರೆ. ಇದರಿಂದ ಆಟೋದಲ್ಲಿದ್ದವರಿಗೆ ಗಾಯಗಳಾಗಿವೆ.
ಅಪಘಾತ ಸ್ಥಳದಲ್ಲಿ ಸೇರಿದ ಜನರೊಡನೆ ಇಶಾನ್ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಕೈ ಕೈ ಮಿಲಾಯಿಸಿದ್ದಾರೆ. ಕೋಪದಲ್ಲಿದ್ದ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದೆ.[ಅಂಡರ್-19 ವಿಶ್ವಕಪ್ ಟೂರ್ನಿಗೆ ಕಿಶನ್ ನಾಯಕ]
ಐಸಿಸಿ ಅಂಡರ್ 19 ವಿಶ್ವಕಪ್ ಆಡಲಿರುವ ಭಾರತ ತಂಡಕ್ಕೆ ನಾಯಕರಾಗಿ ಇಶಾನ್ ಕಿಶಾನ್ ಇತ್ತೀಚೆಗೆ ಆಯ್ಕೆಯಾಗಿದ್ದರು. ಬಾಂಗ್ಲಾದೇಶದಲ್ಲಿ ಈ ಟೂರ್ನಿ ನಡೆಯಲಿದ್ದು, ಭಾರತ ತಂಡಕ್ಕೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದಾರೆ. ಜನವರಿ 28ರಂದು ಐರ್ಲೆಂಡ್ ವಿರುದ್ಧ ಭಾರತ ಮೊದಲ ಪಂದ್ಯವಾಡಲಿದೆ.
ಎ ಗುಂಪಿನಲ್ಲಿರುವ ಭಾರತದ ಜೊತೆಗೆ ಐರ್ಲೆಂಡ್, ನ್ಯೂಜಿಲೆಂಡ್ ಹಾಗೂ ನೇಪಾಳ ತಂಡಗಳಿವೆ. ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕಿಶಾನ್ ಅವರು ಜಾರ್ಖಂಡ್ ಪರ ಆಡುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಟೀಂ ಇಂಡಿಯಾ ಏಕದಿನ ಕ್ರಿಕೆಟ್ ನಾಯಕ ಎಂಎಸ್ ಧೋನಿ ಜೊತೆ ಆಡಿದ ಅನುಭವ ಹೊಂದಿದ್ದಾರೆ. (ಒನ್ ಇಂಡಿಯಾ ಸುದ್ದಿ)