ಕೊಲಂಬೋ, ಜ.28: ಫೆಬ್ರವರಿ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡದ 15 ಜನ ಸದಸ್ಯರನ್ನು ಗುರುವಾರ (ಜನವರಿ 28) ಹೆಸರಿಸಲಾಗಿದೆ. ಮೂರು ಟ್ವೆಂಟಿ20 ಅಂತಾರಾಷ್ಟೀಯ ಪಂದ್ಯಗಳನ್ನು ಶ್ರೀಲಂಕಾ ಹಾಗೂ ಭಾರತ ಆಡಲಿವೆ.
ಶ್ರೀಲಂಕಾ ತಂಡಕ್ಕೆ ದಿನೇಶ್ ಚಾಂಡಿಮಾಲ್ ನಾಯಕರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಲಿ ನಾಯಕ ಲಸಿತ್ ಮಾಲಿಂಗ ಗಾಯಾಳುವಾಗಿರುವುದರಿಂದ ಪ್ರವಾಸಕ್ಕೆ ಆಯ್ಕೆಯಾಗಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಏಂಜೆಲೋ ಮ್ಯಾಥ್ಯೂಸ್, ನುವಾನ್ ಕುಲಶೇಖರ, ರಂಗಣ ಹೆರಾತ್ ಹಾಗೂ ನುವಾನ್ ಪ್ರದೀಪ್ ಅವರು ಕೂಡಾ ತಂಡದಲ್ಲಿ ಸ್ಥಾನ ಪಡೆದಿಲ್ಲ ಎಂದು ಶ್ರೀಲಂಕಾದ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.[ಶ್ರೀಲಂಕಾದಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ]
ಆದರೆ, ಅಚ್ಚರಿಯ ವಿಷಯವೆಂದರೆ 2012ರಿಂದ ಕ್ರಿಕೆಟ್ ನಿಂದ ದೂರವುಳಿದಿರುವ ಅನುಭವಿ ಆಟಗಾರ 36 ವರ್ಷ ವಯಸ್ಸಿನ ದಿಲ್ಹಾರ ಫರ್ನಾಂಡೊ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಪುಣೆಯಲ್ಲಿ ಫೆಬ್ರವರಿ 09ರಂದು ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲ ಟ್ವೆಂಟಿ20 ಪಂದ್ಯ ನಡೆಯಲಿದೆ. ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಜನವರಿ 31ಕ್ಕೆ ಪ್ರವಾಸ ಮುಗಿಸಿ ಭಾರತಕ್ಕೆ ಮರಳಲಿದೆ.
ಶ್ರೀಲಂಕಾ ತಂಡ ಇಂತಿದೆ: ದಿನೇಶ್ ಚಂಡಿಮಾಲ್ (ನಾಯಕ), ತಿಲಕರತ್ನೆ ದಿಲ್ಶನ್, ಸೀಕುಗೆ ಪ್ರಸನ್ನ, ಮಿಲಿಂಡಾ ಸಿರಿವರ್ದೆನ, ಧನುಷ್ಕ ಗುಣತಿಲಕ, ಥಿಸರಾ ಪೆರೆರಾ, ದಸುನ್ ಶನಕ, ಅಸೆಲಾ ಗುಣರತ್ನೆ, ಚಮರ ಕಪುಗೆಡರ, ಚಮೀರ ದುಷ್ಮಂತ, ದಿಲ್ಹಾರ ಫರ್ನಾಂಡೊ, ಕಸುನ್ ರಜಿತಾ, ಬಿನುರಾ ಫರ್ನಾಂಡೋ, ಸಚಿತ್ರ ಸೇನಾನಾಯಕೆ. (ಒನ್ ಇಂಡಿಯಾ ಸುದ್ದಿ)