ಬೆಂಗಳೂರು, ನ.18: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಳಿದೆರಡು ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಿದ್ದು ನಾಯಕ ವಿರಾಟ್ ಕೊಹ್ಲಿ ಆವರ ಮನವಿಯಂತೆ ಅದೇ ತಂಡವನ್ನು ಉಳಿಸಿಕೊಳ್ಳಲಾಗಿದೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮೊದಲೆರಡು ಟೆಸ್ಟ್ ಪಂದ್ಯವಾಡಿದ್ದ 17 ಜನ ಸದಸ್ಯರ ತಂಡವನ್ನೇ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ. ಮೂರನೇ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ಹಾಗೂ ಕೊನೆ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. [ಭಾರತ -ದಕ್ಷಿಣ ಆಫ್ರಿಕಾ ಸರಣಿ ಚಿತ್ರಗಳ ಗ್ಯಾಲರಿ]
ಶಿಖರ್ ಧವನ್ ಸೇರಿದಂತೆ ಆಟಗಾರರ ವೈಯಕ್ತಿಕ ಆಟದ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಒಂದು ತಂಡವಾಗಿ ಸಂಘಟಿತ ಹೋರಾಟದಿಂದ ಮಾತ್ರ ಗೆಲುವು ಸಾಧ್ಯ. ವೃದ್ಧಿಮಾನ್ ಸಹಾ ಕೂಡಾ ಉತ್ತಮ ವಿಕೆಟ್ ಕೀಪರ್ ಆಗಿ ತಂಡಕ್ಕೆ ಕೊಡುಗೆ ನೀಡಿದ್ದಾರೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. [ಭಾರತ -ದಕ್ಷಿಣ ಆಫ್ರಿಕಾ ಸರಣಿ ಸಂಪೂರ್ಣ ಮಾರ್ಗದರ್ಶಿ]
ಪೇಟಿಯಂ ಸ್ವಾತಂತ್ರ್ಯ ಸರಣಿ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಪಂಜಾಬಿನ ಆಲ್ ರೌಂಡರ್ ಗುರ್ ಕೀರತ್ ಸಿಂಗ್ ಅವರು 17ನೇ ಆಟಗಾರರಾಗಿ 2ನೇ ಟೆಸ್ಟ್ ಪಂದ್ಯದಲ್ಲಿ ಸೇರಿಕೊಂಡವರು ಮಿಕ್ಕ ಎರಡು ಪಂದ್ಯಗಳಿಗೂ ಉಳಿಸಿಕೊಳ್ಳಲಾಗಿದೆ.
ಮೊಹಾಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಮಳೆಯ ಕಾರಣ ಪಂದ್ಯ ಡ್ರಾ ಆಗಿರುವುದಕ್ಕೆ ನಿರಾಶೆಗೊಂಡಿದೆ. ನಾಗ್ಪುರದಲ್ಲಿ ನವೆಂಬರ್ 25 ಹಾಗೂ ದೆಹಲಿಯಲ್ಲಿ ಡಿಸೆಂಬರ್ 3 ರಂದು ಹರಿಣಗಳ ಬೇಟೆ ಮುಂದುವರೆಸಲಿದೆ.
ಉಳಿದೆರಡು ಪಂದ್ಯಗಳಿಗೆ ತಂಡ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ವರುಣ್ ಅರೋನ್, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಕೆಎಲ್ ರಾಹುಲ್, ಸ್ಟುವರ್ಟ್ ಬಿನ್ನಿ ಹಾಗೂ ಗುರುಕೀರತ್ ಸಿಂಗ್ ಮಾನ್(ಒನ್ ಇಂಡಿಯಾ ಸುದ್ದಿ)