ರಾಂಚಿ, ಅಕ್ಟೋಬರ್. 24: ನ್ಯೂಜಿಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಜ್ವರದ ಸಮಸ್ಯೆಯಿಂದಾಗಿ ಮೊದಲ ಮೂರು ಪಂದ್ಯಗಳಿಗೆ ದೂರ ಉಳಿದಿದ್ದ ಸುರೇಶ್ ರೈನಾ ಅವರು ಕೊನೆಯ ಎರಡು ಪಂದ್ಯಗಳಿಂದಲೂ ಹೊರ ಹೋಗಿದ್ದಾರೆ.
ಕಳೆದ ಮೂರು ಪಂದ್ಯಗಳಿಗೆ ಆಯ್ಕೆ ಮಾಡಲಾಗಿದ್ದ ಆಟಗಾರರನ್ನು ಕೊನೆಯ ಎರಡು ಪಂದ್ಯಗಳಿಗೆ ಅದೇ ತಂಡವನ್ನು ಆಯ್ಕೆ ಮಾಡಲಾಗಿದೆ. 4ನೇ ಪಂದ್ಯ ಅಕ್ಟೋಬರ್ 26 (ಬುಧವಾರ) ರಾಂಚಿಯಲ್ಲಿ ನಡೆಯಲಿದೆ. ಇನ್ನು ಅಂತಿಮ 5ನೇ ಏಕದಿನ ಪಂದ್ಯ ಅಕ್ಟೋಬರ್ 29 ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಎರಡು ಪಂದ್ಯಗಳಿಗೆ 14 ಆಟಗಾರರ ತಂಡವನ್ನು ಮುಂದುವರೆಸಲು ಭಾರತೀಯ ಆಯ್ಕೆ ಸಮಿತಿ ನಿರ್ಧರಿಸಿದೆ. [ಕಿವೀಸ್ ವಿರುದ್ಧದ 3 ಏಕದಿನ ಪಂದ್ಯಕ್ಕೆ ಭಾರತ ತಂಡ ಪ್ರಕಟ]
ಭಾನುವಾರ ಮೊಹಲಿಯಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯಗಳಿಸಿ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಅವರ ಬದಲಿಗೆ ಯಾವುದೇ ಆಟಗಾರನನ್ನು ಆಯ್ಕೆ ಮಾಡಿಲ್ಲ. 14 ಆಟಗಾರರನ್ನೇ ಮುಂದುವರೆಸಲು ಭಾರತೀಯ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಮಾದ್ಯಮ ಸಲಹೆಗಾರ ತಿಳಿಸಿದ್ದಾರೆ.
ತಂಡ ಇಂತಿದೆ: ಎಂಎಸ್ ಧೋನಿ(ನಾಯಕ), ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ. ಅಕ್ಷರ್ ಪಟೇಲ್, ಜಯಂತ್ ಯಾದವ್, ಅಮಿತ್ ಮಿಶ್ರಾ, ಜಸ್ಪ್ರೀತ್ ಬೂಮ್ರಾ, ಧವಳ್ ಕುಲಕರ್ಣಿ, ಉಮೇಶ್ ಯಾದವ್, ಮನ್ದೀಪ್ ಸಿಂಗ್, ಕೇದಾರ್ ಜಾಧವ್.