ನ್ಯೂಯಾರ್ಕ್, ಸೆ.16: 'ಆ ದಿನ ಇನ್ನೂ ಮರೆಯಲು ಸಾಧ್ಯವಿಲ್ಲ. ವಿಶ್ವಕಪ್ 2007ರಲ್ಲಿ ಸೋತ ಬಳಿಕ ನಮ್ಮನ್ನು ಉಗ್ರಗಾಮಿಗಳಂತೆ ಕಾಣಲಾಯಿತು. ಕ್ರಿಮಿನಲ್ ಗಳಂತೆ ನಮ್ಮನ್ನು ಜನ ನೋಡಲು ಆರಂಭಿಸಿದರು. ಇದಾದ ಬಳಿಕ ನನ್ನ ಬದುಕು ಮತ್ತೊಂದು ತಿರುವು ಪಡೆಯಿತು' ಎಂದು ಎಂಎಸ್ ಧೋನಿ ಹೇಳಿದ್ದಾರೆ.
ಮೈದಾನದಲ್ಲೇ ಎಷ್ಟೇ ಸಮರ್ಥ ನಾಯಕತ್ವ ಪ್ರದರ್ಶಿಸಿದರೂ ಜೀವನದಲ್ಲಿ ಇಂಥ ಘಟನೆಗಳು ಎಂಥವರನ್ನು ಒಮ್ಮೆ ಧೃತಿಗೆಡುವಂತೆ ಮಾಡುತ್ತದೆ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಕೈಗೊಳ್ಳುವುದು ಮುಖ್ಯ ಎಂದು ಧೋನಿ ಹೇಳಿದ್ದಾರೆ.
ಸಿನಿಮಾ ಬಗ್ಗೆ ಧೋನಿ: ನನ್ನ ಜೀವನದ ಬಗ್ಗೆ ಸಿನಿಮಾ ಮಾಡುತ್ತೇನೆ ಎಂದು ನೀರಜ್ ಪಾಂಡೆ ಬಂದಾಗ ನಾನು ಒಂದೇ ಮಾತು ಹೇಳಿದೆ. ನನ್ನ ಬದುಕು ಇದ್ದಂತೆ ತೋರಿಸಿ, ಯಾವುದಕ್ಕೂ ವೈಭವೀಕರಣ ಮಾಡಬೇಡಿ ಎಂದು ಕೇಳಿಕೊಂಡೆ. ಅದರಂತೆ ಚಿತ್ರ ಮೂಡಿ ಬಂದಿದೆ ಎಂದು ಧೋನಿ ಮೆಚ್ಚುಗೆ ವ್ಯಕ್ತಪಡಿಸಿದರು.[ಇಷ್ಟಕ್ಕೂ ಧೋನಿ ಮನೆಗೆ ಕಲ್ಲು ಹೊಡೆದಿದ್ದು ಯಾರು?]
ಸುಶಾಂತ್ ಸಿಂಗ್ ಅಭಿನಯದ ಎಂಎಸ್ ಧೋನಿ- ದಿ ಅನ್ ಟೋಲ್ಡ್ ಸ್ಟೋರಿ ಚಿತ್ರ ಸೆಪ್ಟೆಂಬರ್ 30ರಂದು ತೆರೆ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ನ್ಯೂಯಾರ್ಕ್ ನಲ್ಲಿರುವ ಧೋನಿ ಅವರು ತಮ್ಮ ವೃತ್ತಿ ಬದುಕು, ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ನನ್ನ ಪೋಷಕರಿಗೆ ನನ್ನ ಕ್ರಿಕೆಟ್ ಬದುಕಿನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಈ ಸಿನಿಮಾ ಮೂಲಕ ನನ್ನ ಬದುಕಿನ ಪಯಣದ ರೀ ಕ್ಯಾಪ್ ಸಿಗಲಿದೆ. ನನ್ನ ಬಾಲ್ಯ, ಶಾಲೆ, ಗೆಳೆಯರ ಜತೆ ಒಡನಾಟ ಎಲ್ಲವನ್ನು ಮತ್ತೊಮ್ಮೆ ನೋಡಬಹುದಾಗಿದೆ ಎಂದರು. (ಪಿಟಿಐ)