ನವದೆಹಲಿ, ಏಪ್ರಿಲ್ 27: ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ (ಐಸಿಸಿ) ಭಾರತದ ಪ್ರಾಬಲ್ಯ ಕ್ರಮೇಣ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ) ಅಲ್ಲಿ ಮೂಲೆಗುಂಪಾಗುವ ಸಾಧ್ಯತೆಗಳು ಗೋಚರಿಸಿವೆ.
ದುಬೈನಲ್ಲಿರುವ ಐಸಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಆಡಳಿತಾತ್ಮಕ ಹಾಗೂ ಆರ್ಥಿಕ ವಿಭಾಗದ ಸುಧಾರಣೆ ಕುರಿತಾದ ಚುನಾವಣೆಯಲ್ಲಿ ಭಾರತಕ್ಕೆ ಜಯ ಸಿಕ್ಕಿಲ್ಲ.
ಈವರೆಗೆ ಇರುವ ಆಡಳಿತಾತ್ಮಕ ವ್ಯವಸ್ಥೆಯನ್ನು ಬದಲಿಸಕೂಡದೆಂದು ಭಾರತ ಮಂಡಿಸಿದ್ದ ಅಹವಾಲಿಗೆ ಬುಧವಾರ ನಡೆದ ಚುನಾವಣೆಯಲ್ಲಿ 1-9 ಮತಗಳ ಅಂತರದಲ್ಲಿ ಸೋಲಾಗಿದೆ.[ಬೆಂಗಳೂರಲ್ಲಿ ಗುರುವಾರ ಮಳೆ ಬಂದರೆ ಮ್ಯಾಚ್ ಮರೆತು ಬಿಡಿ]
ಇನ್ನು, ಐಸಿಸಿಯಲ್ಲಿನ ಆರ್ಥಿಕ ವ್ಯವಸ್ಥೆ ಬದಲಾವಣೆ ವಿಚಾರದಲ್ಲಿಯೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಭಾರತದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚುನಾವಣೆಯಲ್ಲಿಯೂ ಬಿಸಿಸಿಐಗೆ 2-8 ಅಂತರದಲ್ಲಿ ಸೋಲಾಗಿದೆ.
ಆಡಳಿತಾತ್ಮಕ ಸುಧಾರಣೆ ಏನು?
ಐಸಿಸಿಯ ಆಡಳಿತದಲ್ಲಿ ಬಿಸಿಸಿಐ ಹತ್ತಾರು ವರ್ಷಗಳಿಂದ ಮೈಲುಗೈ ಸಾಧಿಸುತ್ತಲೇ ಬಂದಿದೆ. ಹಾಗಾಗಿಯೇ ಇಲ್ಲಿ ಈವರೆಗೆ ಬಿಗ್ ತ್ರೀ (ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್) ಎಂದೆನಿಸಿದ್ದ ಕ್ರಿಕೆಟ್ ಮಂಡಳಿಗಳದ್ದೇ ಪ್ರಮುಖ ಪಾತ್ರವಾಗಿತ್ತು. ಆಡಳಿತಾತ್ಮಕವಾದ ನಿರ್ಧಾರಗಳನ್ನು ಈ ಮೂರೂ ಮಂಡಳಿಗಳ ಸದಸ್ಯರು ಹೇಳಿದ್ದೇ ಅಂತಿಮವಾಗಿರುತ್ತಿತ್ತು. ಇದು ಸಹಜವಾಗಿ ಉಳಿದ ದೇಶಗಳ ಕ್ರಿಕೆಟ್ ಮಂಡಳಿಗಳಲ್ಲಿ ಅಸಮಾಧಾನ ಉಂಟು ಮಾಡಿದ್ದವು.[ಕನ್ನಡದಲ್ಲಿ ಮಾತನಾಡಿದ ಮನೀಶ್ ಗೆ ಅಚ್ಚರಿ ಮೂಡಿಸಿದ 'ಪಾಮಿ']
ಆರ್ಥಿಕ ಸುಧಾರಣೆ ಏನು?
ಮೊದಲೇ ಹೇಳಿದಂತೆ, ಐಸಿಸಿಯಲ್ಲಿ ಬಿಗ್ ತ್ರೀ ಸಂಸ್ಥೆಗಳಾದ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳೇ ಆರ್ಥಿಕ ವಿಚಾರದಲ್ಲೂ ಹೆಚ್ಚು ಸ್ವಾತಂತ್ರ್ಯ ಪಡೆಯುತ್ತಿದ್ದವು. ಅದರಂತೆ, ಪ್ರತಿ ವರ್ಷ ಐಸಿಸಿ ಅಧೀನದಲ್ಲಿರುವ ಕ್ರಿಕೆಟ್ ಮಂಡಳಿಗಳಿಗೆ ನೀಡಲಾಗುತ್ತಿದ್ದ ಅನುದಾನದಲ್ಲಿನ ಸಿಂಹಪಾಲು ಈ ಮೂರು ಕ್ರಿಕೆಟ್ ಮಂಡಳಿಗಳಿಗೇ ಹರಿದು ಹೋಗುತ್ತಿತ್ತು.
ಇಂಥ ವ್ಯವಸ್ಥೆಗೆ ಕಡಿವಾಣ ಹಾಕಿದ್ದೇ, ಬಿಸಿಸಿಐನಿಂದ ಕಳೆದ ವರ್ಷ ಐಸಿಸಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಶಶಾಂಕ್ ಮನೋಹರ್.
ಅದೇನೇ ಇರಲಿ. ಬುಧವಾರ ನಡೆದ ಚುನಾವಣೆಯಂತೂ ಬಿಸಿಸಿಐನ ಎಲ್ಲಾ ವಾದಗಳಿಗೆ ಮಾನ್ಯತೆಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಏಷ್ಯಾದಲ್ಲಿನ ಕೆಲ ಕ್ರಿಕೆಟ್ ಮಂಡಳಿಗಳಿಗೆ (ಉದಾಹರಣೆ, ಬಾಂಗ್ಲಾದೇಶ, ಶ್ರೀಲಂಕಾ) ಹಣ ಹಂಚಿ ತನ್ನದೇ ಒಂದು ಪಡೆ ಕಟ್ಟಿಕೊಂಡು ಐಸಿಸಿಯಲ್ಲಿ ತನಗೆ ಬೆಂಬಲವಾಗಿರುವಂತೆ ನೋಡಿಕೊಳ್ಳುತ್ತಿದ್ದ ಬಿಸಿಸಿಐಗೆ ಈ ಬಾರಿ ಸೋಲಾಗಿರುವುದು ಮುಂದಿನ ದಿನಗಳಲ್ಲಿ ಐಸಿಸಿಯಲ್ಲಿ ಭಾರತದ ಅಧಿಪತ್ಯವನ್ನು ಕೊನೆಗಾಣಿಸಲಿದೆ ಎಂದು ಹೇಳಲಾಗಿದೆ.