ಮೀರ್ ಪುರ (ಬಾಂಗ್ಲಾದೇಶ), ಫೆ. 26: ಕ್ರಿಕೆಟ್ ಲೋಕದ ಪ್ರಮುಖ ವೇಗಿ ಶ್ರೀಲಂಕಾದ ಲಸಿತ್ ಮಾಲಿಂಗ ಅವರು ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಏಷ್ಯಾಕಪ್ ನಲ್ಲಿ ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಲಂಕಾಕ್ಕೆ ಜಯ ತಂದುಕೊಟ್ಟ ಮಾಲಿಂಗ ಅವರು ವಿಶ್ವ ಟಿ20 ನಂತರ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟಿ20 ನಂತರ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಿದೆ ಎಂದು ಮಾಲಿಂಗ ಹೇಳಿದ್ದಾರೆ. ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಮಾಲಿಂಗ, ನೋವಿನೊಂದಿಗೆ ಆಡಲು ಕಷ್ಟವಾಗುತ್ತಿದೆ. ಇದರಿಂದ ತಂಡಕ್ಕೆ ನನ್ನ ಶೇ 100ರಷ್ಟು ಸೇವೆ ಸಿಗುವುದಿಲ್ಲ ಎಂದಿದ್ದಾರೆ.
ಏಷ್ಯಾಕಪ್ 2016 : ತಂಡಗಳು | ವೇಳಾಪಟ್ಟಿ
ಮಹೇಲ ಜಯವರ್ದನೆ ಹಾಗೂ ಕುಮಾರ್ ಸಂಗಕ್ಕಾರರಂತೆ ಗೆಲುವಿನೊಂದಿಗೆ ಕ್ರಿಕೆಟ್ ಗೆ ವಿದಾಯ ಹೇಳುವ ಬಯಕೆ ಇದೆ ಎಂದಿರುವ ಮಾಲಿಂಗ, ಗಾಯದ ಸಮಸ್ಯೆ ಸರಿಯಾದರೆ ಚುಟುಕು ಕ್ರಿಕೆಟ್ ನಲ್ಲಿ ಮುಂದುವರೆಯುವ ಆಶಯ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ನಾನು ಶೇ 60 ರಿಂದ 70 ರಷ್ಟು ಮಾತ್ರ ಫಿಟ್ ಆಗಿದ್ದೇನೆ. ವಿಶ್ವ ಟಿ20 ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಬೇಕಿದೆ. ಚಾಂಪಿಯನ್ ಪಟ್ಟ ಉಳಿಸಿಕೊಳ್ಳಬೇಕು. ಶ್ರೀಲಂಕಾ ಹಾಗೂ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ನಾನು ಉತ್ತಮ ಪ್ರದರ್ಶನ ನೀಡಲು ನೋವು ನಿವಾರಕ ಔಷಧಕ್ಕೆ ಮೊರೆ ಹೋಗಬೇಕಿದೆ ಎಂದು ಮಾಲಿಂಗ ಹೇಳಿಕೊಂಡಿದ್ದಾರೆ.