ಮುಂಬೈ, ಮೇ 23: ಶೀಘ್ರದಲ್ಲೇ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಾಗಿ ಪ್ರಕಟಗೊಂಡಿರುವ ಭಾರತ ತಂಡದಲ್ಲಿ ಅನುಭವಿ ಆಟಗಾರ ಹಾಗೂ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಸ್ಥಾನ ಪಡೆದಿಲ್ಲ. ಆದರೆ, ಇದು ಅವರಿಗೆ ಬೇಸರ ತಂದಿಲ್ಲವಂತೆ. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಪಡೆಯದಿದ್ದಕ್ಕೆ ಬೇಸರವಾಗಿಯೇ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ''ನಾನು ಭಾರತ ತಂಡದಲ್ಲಿ ಸ್ಥಾನ ಸಿಗಲಿ ಎಂದು ಕ್ರಿಕೆಟ್ ಆಡುವುದಿಲ್ಲ. ನನ್ನ ಆತ್ಮ ತೃಪ್ತಿಗೆ ಆಡುತ್ತೇನೆ. ಸ್ಥಾನ ಸಿಗದಿದ್ದರೂ ಚಿಂತೆಯಿಲ್ಲ'' ಎಂದು ಅವರು ವಿವರಿಸಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಫೈನಲ್ ನಲ್ಲಿ ಜಯಭೇರಿ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು ಪಾರ್ಥೀವ್.
ಈ ಮೊದಲು, ಪಟೇಲ್ ಚಾಂಪಿಯನ್ಸ್ ಟ್ರೋಫಿಗಾಗಿ ಪ್ರಕಟಗೊಳ್ಳಬೇಕಿದ್ದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅಂತಿಮ ಪಟ್ಟಿಯಲ್ಲಿ ಅವರಿಗೆ ಸ್ಥಾನ ತಪ್ಪಿತು.