ಶಿವಮೊಗ್ಗ, ಮೇ 26: ಕರ್ನಾಟಕದ ಮಾಜಿ ಕ್ರಿಕೆಟರ್, ರಣಜಿ ತಂಡದ ಹಾಲಿ ಕೋಚ್ ಜೆ ಅರುಣ್ ಕುಮಾರ್ ಅವರು ಟೀಂ ಇಂಡಿಯಾ ಕೋಚ್ ಆಗಲು ರೆಡಿ ಎಂದು ಘೋಷಿಸಿದ್ದಾರೆ.
ಸದ್ಯ ಶಿವಮೊಗ್ಗದಲ್ಲಿ ನಡೆಯುತ್ತಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ವಲಯ ಶಿಬಿರದಲ್ಲಿ ಕೋಚಿಂಗ್ ಮಾಡುತ್ತಿರುವ ಅರುಣ್ ಕುಮಾರ್ ಅವರು ಈ ವಿಷಯವನ್ನು ತಿಳಿಸಿದ್ದಾರೆ.[ಕೋಚ್ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ!]
2013-14, 2014-15ನೇ ಸಾಲಿನಲ್ಲಿ ಸತತವಾಗಿ ರಣಜಿ ಟ್ರೋಫಿ, ವಿಜಯ್ ಟ್ರೋಫಿ ಹಾಗೂ ಇರಾನಿ ಕಪ್ ಗೆದ್ದ ಕರ್ನಾಟಕ ತಂಡಕ್ಕೆ ಕೋಚ್ ಆಗಿ 'ಜಾಕ್' ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
41ವರ್ಷ ವಯಸ್ಸಿನ ಜೆ ಅರುಣ್ ಕುಮಾರ್ ಅವರು 109 ಪ್ರಥಮ ದರ್ಜೆ ಪಂದ್ಯ, 100 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕೂಡಾ ಬ್ಯಾಟ್ ಬೀಸಿದ್ದರು. ಇದಕ್ಕೂ ಮುನ್ನ ಅಂಡರ್ 19 ಭಾರತದ ತಂಡದ ಆರಂಭಿಕ ಬ್ಯಾಟ್ಸ್ ಮನ್ ಆಗಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು.
ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ, ಸಹಾಯಕ ಕೋಚ್ ಸಂಜಯ್ ಬಂಗಾರ್(ಬ್ಯಾಟಿಂಗ್), ಭರತ್ ಅರುಣ್(ಬೌಲಿಂಗ್), ಆರ್ ಶ್ರೀಧರ್ (ಫೀಲ್ಡಿಂಗ್) ಅವರ ಗುತ್ತಿಗೆ ಅವಧಿ ಮುಕ್ತಾಯವಾಗಿದೆ. ವಿಶ್ವ ಟಿ20 ನಂತರ ಖಾಲಿ ಇರುವ ಈ ಹುದ್ದೆಗಳನ್ನು ತುಂಬಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅರ್ಜಿ ಆಹ್ವಾನಿಸಿದೆ. ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಮುನ್ನ ಈ ಹುದ್ದೆಗಳನ್ನು ತುಂಬುವುದಾಗಿ ಬಿಸಿಸಿಐ ಹೇಳಿದೆ.